ಪಾರಿಜಾತ - ಪ್ರೇಮಿಗಳಿಗೆ ಮುದ ಮಿಕ್ಕಿದವರಿಗೂ ಹದ

ಮತ್ತೊಂದು ರಿವ್ಯೂ.....!!

ಪಾರಿಜಾತ

ನಾಯಕ 'ಬಾಸ್' ಅಲಿಯಾಸ್ ಭಾಸ್ಕರ್  (ದಿಗಂತ್)  ಸೋಮಾರಿ, ನಿರುದ್ಯೋಗಿ ಮತ್ತು ಬೀದಿ ತಿರುಕ, ಅವರ ಹಿಂದಿನ ಸುಮಾರು ಸಿನಿಮಾಗಳಂತೆ ಇಲ್ಲೂ ಬೇಜವಾಬ್ದಾರಿ ಮನುಷ್ಯ. ಹಾಗಂತ ಕೆಲಸ ಹುಡುಕಿಕೊಂಡು ಹೋಗೋ ಪಾರ್ಟಿ ಅಲ್ಲ. ನಿನ್ ಕಾಲ್ ಮೇಲ್ ನೀನ್ ನಿಲ್ಲೋ ಅಂದ್ರೆ ನಾವೇನ್ ನಮ್ ತಾತನ ಕಾಲ್ ಮೇಲ್  ನಿಂತಿದಿವಾ  ಎನ್ನುವ ತಲಾಹರಟೆ. ಮನೇಲಿ ಮದುವೆ ಆಗ್ಬೇಕು ಅಂತ ಪ್ರಸ್ತಾಪ ಮಾಡಿದಾಗ ಎಲ್ಲ ಸೇರಿ ಅವನಿಗೆ ಮಂಗಳಾರತಿ ಮಾಡ್ತಾರೆ, ಕೈಯಲ್ಲಿ ಕೆಲಸ ಇಲ್ಲ ಮದ್ವೆ ಬೇರೆ ಎಂದು ಮೂದಲಿಸುತ್ತಾರೆ. ಅವನು ಮನೆ ಬಿಟ್ಟು ಹೋಗಲು ಸಜ್ಜಾಗುತ್ತಾನೆ. ಗೇಟಿನ ಬಳಿ ಹೋಗುತ್ತಿರಬೇಕಾದರೆ ಅವರ ಅಣ್ಣ ಓಡಿ ಬಂದು...

"ಮಳೆ   ಬರ್ತಾಇದೆ, ಛತ್ರಿ ತಗೊಂಡು ಹೋಗು, 
ಮತ್ತೆ ಅದಕ್ಕೋಸ್ಕರ ಮನೆ ಬಿಟ್ಟು ಹೋಗೋ ನಿರ್ಧಾರ ಕೈ ಬಿಡಬೇಡ " ಅಂತಾನೆ. ಮಧ್ಯಂತರ ವಿರಾಮ. ಪರದೇ  ಮೇಲೆ "ಮಳೆ ನಿಂತ ಮೇಲೆ ಬೆಂಕಿ ತರ ಕೆಲಸ ಮಾಡ್ತಾನೆ" ಎಂಬ ಸಾಲು ಬಿತ್ತರವಾಗತ್ತೆ.
 ಹೀಗೆ ಚಿತ್ರದುದ್ದಕ್ಕೂ ಗಂಭೀರ ಸನ್ನಿವೇಶಗಳೆಲ್ಲ ಹಾಸ್ಯದಲ್ಲಿ ಕೊನೆಯಾಗ್ತವೆ. 


ನಿರ್ದೇಶಕ ಪ್ರಭು ಶ್ರೀನಿವಾಸ್ ಮೂಲತಃ ನೃತ್ಯ ಸಂಯೋಜನಕಾರ. ಕನ್ನಡದಲ್ಲಿ ಹಿಂದೊಮ್ಮೆ 'ಜೀವಾ' ಚಿತ್ರ ಮಾಡಿದ್ದರು. 
ಈಗ 'ಪಾರಿಜಾತ' ವನ್ನು ಪ್ರೇಮಿಗಳ ಮುಂದಿಟ್ಟಿದ್ದಾರೆ. ಇದು ಒಂಥರ ROM -COM  (ರೊಮ್ಯಾಂಟಿಕ್  ಕಾಮಿಡಿ) ಸಬ್ಜೆಕ್ಟ್.
ಚಿತ್ರಕಥೆ ಅತ್ಯಂತ ಸರಳ. ನಾಯಕನ ಬೇಜವಾಬ್ದಾರಿಯನ್ನು ನಾಯಕಿ ಇಷ್ಟಪಟ್ಟರೂ ಮದುವೆ ವಿಷಯ ಬಂದಾಗ ಸಹಜವಾಗಿ ನಿರಾಕರಿಸುತ್ತಾಳೆ. ನಾಯಕ ಸಂಪಾದನೆ ಮಾಡಲು ಶರಣ್ ಜೊತೆಗೂಡಿ ಸಾಲಮಾಡುತ್ತಾನೆ, ಟುಟೋರಿಯಲ್ಸ್ ತೆರೆಯುತ್ತಾನೆ, ಸಾಲ ಕೊಟ್ಟ ಧಣಿಗಳ ಮಗ ಅದೇ ಟುಟೋರಿಯಲ್ಸ್ ನಲ್ಲಿ ಕಲಿತು ಎಸ್ಎಸ್ಎಲ್ಸಿ ಪಾಸ್ ಮಾಡಿದಾಗ ಧಣಿಗಳು ಮೆಚ್ಚಿ ಸಾಕಷ್ಟು ಉಡುಗೊರೆಯನ್ನು ಕೊಡುತ್ತಾರೆ. ಇತ್ತ ಮನೆಯಲ್ಲಿ ಅವನಿಗೆ ಮದುವೆ ಮಾಡಲು ಒಪ್ಪುತ್ತಾರೆ. ಸಿನಿಮಾ ಮುಗಿತು ಅನ್ನುವ ಹೊತ್ತಿಗೆ ಕಥೆಯಲ್ಲಿ ಕೆಲವು ತಿರುವುಗಳು ಸಿಗುತ್ತವೆ. ಅದನ್ನು ನೀವು ಚಿತ್ರಮಂದಿರದಲ್ಲಿ ನೋಡಿ.



ಐoದ್ರಿತ ರೇ ಮತ್ತು ದಿಗಂತ್  ನಡುವಿನ 'ರಸಾಯನ ಶಾಸ್ತ್ರ' ಚೆನ್ನಾಗಿ ಕೆಲಸ ಮಾಡಿದೆ. ಇಬ್ಬರು ಪರದೆ ಮೇಲೆ ಮಿಂಚ್ತಾರೆ.
ಲಿಪ್ಲಾಕ್ ಮಾಡಿದ್ದಾರೆ ಎಂಬ ಗುಲ್ಲು ಸುಳ್ಳು ಎಂದು ಚಿತ್ರದಲ್ಲಿ ತಿಳಿಯುತ್ತದೆ. ತುಟಿಗೆ ತುಟಿ ಒತ್ತುವ  ಹಾಗೆ ತೋರಿಸಿದ್ದಾರೆ ನಿರ್ದೇಶಕರು, ಮಧ್ಯ ಗಾಜಿಟ್ಟು.


ಐoದ್ರಿತ ರೇ ತುಂಡುಡುಗೆಯಲ್ಲಿ ಮಾದಕವಾಗಿ ಕಾಣಿಸುತ್ತಾರೆ. ಅವರ ಮುಖಭಾವ ಈ ಚಿತ್ರದಲ್ಲಿ ಅತ್ಯುತ್ತಮವಾಗಿದೆ, ಅಭಿನಯದಲ್ಲೂ ಪಕ್ವತೆ ಕಾಣುತ್ತಿದೆ. ದಿಗಂತ್ ಗೆ ಈ ಥರದ ಪಾತ್ರ ನೀರು ಕುಡಿದಂತೆ. ಶರಣ್ ಕಾಮಿಡಿ ಬಂದಾಗ ಜನ ಬಾಯ್ತುಂಬಾ ನಗ್ತಾರೆ. ದಿಗಂತ್ ಅಣ್ಣ ನ ಪಾತ್ರದಲ್ಲಿ ಕಾದಲ್ ದಂಡಪಾನಿ ಮಜಾ ಕೊಡುತ್ತಾರೆ. ಮಿಕ್ಕಂತೆ ಸಾಧು ಕೋಕಿಲ, ಪದ್ಮಜಾ ರಾವ್, ಮುಖ್ಯಮಂತ್ರಿ ಚಂದ್ರು ಇದ್ದಾರೆ. ಶಕೀಲಾ, ರಘು ಮುಖರ್ಜೀ ಬಂದು ಹೋಗುತ್ತಾರೆ. ಮನೋಮೂರ್ತಿ ಸಂಗೀತದಲ್ಲಿ 'ನೀ ಮೋಹಿಸು' ಮನಮುಟ್ಟುತ್ತದೆ, ಹಾಸ್ಯ ಸನ್ನಿವೇಶಗಳಲ್ಲಿ ಅವರು ಹಿನ್ನಲೆ ಸಂಗೀತ ಚೆನ್ನಾಗಿ ಜೋಡಿಸಿದ್ದಾರೆ. ಶ್ರೀನಿವಾಸ್ ದೇವಾಮ್ಸನ್ ಕ್ಯಾಮೆರ ಮೋಡಿಯಲ್ಲಿ 'ಓ ಪಾರಿಜಾತ' ಹಾಡಿನ ಮಂಜು ಕವಿದ ವಾತಾವರಣದ ದೃಶ್ಯ ವೈಭವ ಕಾಣಸಿಗುತ್ತದೆ. 


ತಮಿಳಿನ   'ಬಾಸ್ ಎಂಗಿರ ಬಾಸ್ಕರನ್' ರೀಮೇಕಾದ ಈ ಚಿತ್ರವೊಂದು ಈಸಿ ಟೈಮ್ ಪಾಸ್. ಕಥೆ - ಚಿತಕತೆಯ ಕ್ರೆಡಿಟ್ ತಮಿಳಿಗೆ ಸೇರಬೇಕಾದರೂ ಕನ್ನಡದಲ್ಲಿ ಹೆಚ್ಚು ಕಲರ್ಫುಲ್ ಆಗಿ ಬಂದಿದೆ ಎನ್ನುವುದು ಎರಡು ಚಿತ್ರಗಳನ್ನು ನೋಡಿದವರ ಅಭಿಪ್ರಾಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ