EDEGAARIKE MOVIE REVIEW

 ಮನಸಿನಲ್ಲಿ ಉಳಿಯುವ ಎದೆಗಾರಿಕೆ !!!

ಎದೆ ಝಲ್ ಎನಿಸೋ ಕಥೆಗೆ ಸ್ವಲ್ಪ ಡಲ್ ಎನಿಸೋ  ಟೆಕ್ನಿಕಲ್ ಅಂಶಗಳ ಹೊತ್ತು ಬಂದಿರುವ ಚಿತ್ರವೇ 'ಎದೆಗಾರಿಕೆ'.
ಮಹಿಳಾ ನಿರ್ದೇಶಕರೊಬ್ಬರು ಒಬ್ಬ ಪುರುಷನ ಎದೆಗಾರಿಕೆಯ ಮೇಲೆ ಚಿತ್ರ ಮಾಡಿರುವುದು ಒಳ್ಳೆಯ ಬೆಳವಣಿಗೆ. 
ಹಾಗಂತ ಇದು ಮಹಿಳಾ ಪ್ರಧಾನ ಚಿತ್ರವಾಗದೆ ಕಥೆಯಲ್ಲಿ ಪುರುಷ ಪ್ರಾಧಾನ್ಯತೆ ಇದೆ. ಪತ್ರಕರ್ತ ಅಗ್ನಿ ಶ್ರೀಧರ್ ರವರ  ಕಿರು ಕಾದಂಬರಿ ಆಧಾರಿತ ಈ ಚಿತ್ರ ಭೂಗತ ಜಗತ್ತಿನ ತಣ್ಣನೆ ಕ್ರೌರ್ಯದ ಕನ್ನಡಿಯಂತಿದೆ.

 ಮುಂಬೈನ ಸುಪಾರಿ ಕಿಲ್ಲರ್ ಒಬ್ಬನನ್ನು 'ಉಡಾಯಿಸಲು' ಬೆಂಗಳೂರಿನ ಭೂಗತ ಲೋಕದ ಒಂದು ತಂಡವೊಂದಕ್ಕೆ ದುಬೈ ಇಂದ 'ಆರ್ಡರ್' ಬಂದಿರುತ್ತದೆ. ಆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಅವರು ಬೆಂಗಳೂರಿನಿಂದ ಸಕಲೇಶಪುರಕ್ಕೆ 'ಮುಂಬೈ'ನವನೊಂದಿಗೆ ಹೋಗುತ್ತಾರೆ. ಅಲ್ಲಿ ಕಾಣಸಿಗುವುದೇ ಮನುಷ್ಯನೋರ್ವನ ಎದೆಗಾರಿಕೆ. ಅವನು ಸಾವಿಗೆ ಒಡ್ಡುವ ಎದೆಗಾರಿಕೆ. ಹಾಗಂತ ಅವನು ಕಲ್ಲು ಹೃದಯದವನಲ್ಲ. ಅವನಿಗೂ ಒಬ್ಬಳು ಪ್ರೇಯಸಿ ಇರುತ್ತಾಳೆ. ಸುಪಾರಿ ಒಂದಿದ್ರೆ ಸಾಕು ಎಂಥವರನ್ನು ಬೇಕಾದರೂ ಕೊಲ್ಲಬಲ್ಲ ಆತ ಓರ್ವ ಮುದುಕಿಗೆ ಗುಂಡು ಹೊಡೆಯಲು ನಿರಾಕರಿಸುತ್ತಾನೆ. ಹೀಗೆ ಅವನೆಷ್ಟು ಮನುಷ್ಯ ಹೃದಯೀ ಅಂತ ತೋರಿಸುತ್ತಲೇ ಚಿತ್ರಕಥೆ ಅವನ ಸಾವಿನತ್ತ ಹೊರಳುತ್ತದೆ. ಅವನ ಸಾವು ಅವನಿಗೆ ತಿಳಿದಿರುತ್ತದೆ.

ಇಂಥಾ ಕ್ಲಾಸಿಕ್ ಎನಿಸುವ ಕಥೆಗೆ ಚುರುಕ್ ಎನಿಸುವ ಸಂಭಾಷಣೆ ಇದೆ. ಚಿತ್ರಕಥೆಯಲ್ಲಿ ಧಂ ಇದೆ. ಕೆಲವು ಶಾಟ್ಸ್ ತುಂಬಾನೇ ಅರ್ಥವತ್ತಾಗಿದೆ. ಆದರೆ ಒಟ್ಟಾರೆಯಾಗಿ ನೋಡಿದಾಗ ದೃಶ್ಯಗಳ ಕ್ವಾಲಿಟಿ ಶ್ರೇಷ್ಠ ದರ್ಜೆಯದ್ದಲ್ಲ. ಅದಕ್ಕೆ ಬಜೆಟ್ ಕಾರಣವಿರಬಹುದು. ಈಗಿನ ಎಲ್ಲ ಚಿತ್ರಗಳಲ್ಲಿ ಕಾಣುವ ಕಲರ್ ಗ್ರೇಡಿಂಗ್ ಈ ಚಿತ್ರದಲ್ಲಿ ಕಾಣುವುದೇ ಇಲ್ಲ. ಇದೇ ಚಿತ್ರವನ್ನು ಇನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದಿತ್ತು, ಸೂಕ್ತ ತಂತ್ರಜ್ಞಾನ ಬಳಸಿದ್ದರೆ. 
ಉದಾಹರಣೆಗೆ, ತುಂಬಾ ಭಾವನಾತ್ಮಕ 
ಸನ್ನಿವೇಶಗಳಲ್ಲಿ, ಭೂಗತ ಜಗತ್ತನ್ನು ತೋರಿಸುವಾಗ, ಕಾಡಿನಲ್ಲಿ ಚಿತ್ರಿಸುವಾಗ ಕ್ರೇನ್ ಬಳಸಿದ್ದರೆ ಅದು ಕಥೆ ಹೇಳುವ ರೀತಿಯೇ ಬೇರೆ. ಅದು ಹೆಚ್ಚು ಬಳಕೆಯಾಗಿಲ್ಲ. ಕೆಲವು ಋಣಾತ್ಮಕ ಅಂಶಗಳನ್ನು  ಬದಿಗೊತ್ತಿ ನೋಡಿದರೆ, 'ಎದೆಗಾರಿಕೆ' ನಿಸ್ಸಂಶಯವಾಗಿ ಒಳ್ಳೆ ಪ್ರಯತ್ನ.

ಅತುಲ್ ಕುಲಕರ್ಣಿ ಅಭಿನಯಕ್ಕೆ ಧಂಗು ಬಡಿಸುವಷ್ಟು ಅದ್ಭುತ. ಅವರ ಮುಂದೆ ಆದಿತ್ಯ, ಸೃಜನ್ ಲೋಕೇಶ್, ಧರ್ಮ ಎಲ್ಲ ಮಾಸ್ಕ್ ಆಗ್ತಾರೆ.


ಮಿಸ್ ಮಾಡ್ದೆ ಚಿತ್ರ ನೋಡಿ.. ಕೊನೆಯಲ್ಲಿ ತಲೆ ಬಿಮ್ ಅಂದ್ರೆ ಚಿತ್ರ ಮಾಡಿದವರಿಗೆ ಸಾರ್ಥಕತೆ...

~ಹೊಗೆ

DRAMA KANAADA MOVIE REVIEW

ಭಟ್ರು ಕಥೆ ಹೇಳ್ತಾವ್ರೆ .. ಒಂದ್ಸಲ ಹೋಗ್ಬನ್ನಿ.. !!

ಜೀವನ ನಾಟಕರಂಗ, ನಾವೆಲ್ಲ ಪಾತ್ರಧಾರಿಗಳು, ದೇವರೇ ಸೂತ್ರಧಾರ ಎಂಬ ಅನಾದಿಕಾಲದ ನುಡಿಯನ್ನು ನಿರ್ದೇಶಕರು
ಚಿಕ್ಕದಾಗಿ ಚೊಕ್ಕದಾಗಿ 'ಬೊಂಬೆ ಆಡ್ಸೋನು ಮೇಲೆ ಕುಂತವ್ನೆ' ಅಂತ ಹೇಳಿ ತುಂಡ್ ಹೈಕಳ ಕೈಯಲ್ಲಿ ಒಂದು ನಾಟಕೀಯ ತಿರುವುಗಳಿರುವ ಡ್ರಾಮಾ ಆಡಿಸಿದ್ದಾರೆ. ಮುಂಗಾರುಮಳೆ,ಗಾಳಿಪಟ ನಂತರ ಭಟ್ರ ಕಡೆಯಿಂದ ಅಂಥಾ  ಒಂದು ಗಟ್ಟಿ ಕಥೆಯುಳ್ಳ ಚಿತ್ರ ಬಂದಿಲ್ಲವೆನ್ನುವ ಆರೋಪದಿಂದ ಒಂದು ಪಕ್ಕಾ 'ಡ್ರಾಮ' ಆಡಿಸಿ ಆರೋಪ ಮುಕ್ತರಾಗಿದ್ದಾರೆ.

ಕಥೆಯಲ್ಲಿ ಎಂದಿನಂತೆ (ಭಟ್ರ ಸ್ಟೈಲ್) ಓತ್ಲಾ ಹೊಡೆಯುವ ಇಬ್ಬರು ನಾಯಕರು. ಅವರಿಗೆ ತುಂಡ್ ಹೈಕಳು ಎಂಬ ನಾಮಕರಣ. ಹಿಂಗೇ ಓತ್ಲಾ ತಿರುಗೋ ಇಬ್ಬರ ಚೇಷ್ಟೆ ತರಲೆಗಳು ಸಾಗ್ತಿದ್ದಂತೆ ಕಥೆ ನಾಯಕಿ(ರಾಧಿಕಾ ಪಂಡಿತ್) ಕಡೆಗೆ ಮುಖ ಮಾಡುತ್ತದೆ. ಪ್ರಾಣಕ್ಕೆ ಅಪಾಯವಿರುವ ನಾಯಕಿ, ನಾಯಕಿ ತಂದೆ ಅದಕ್ಕೆ ಕಾರಣರಾಗಿರುವುದು, ನಾಯಕ ನಾಯಕಿ ಭೇಟಿ, ಲವ್ವು ಗಿವ್ವು ಇತ್ಯಾದಿಗಳ ಜೊತೆಗೆ ಚಿತ್ರದಲ್ಲಿ ದೊಡ್ಡ ನಾಟಕವೇ ಅಡಗಿದೆ. ಇದರ ಜೊತೆಗೆ ಇರುವ ಮತ್ತೊಂದು ವಿಶೇಷ ಅಂಶ ಎಂದರೆ ಆಧ್ಯಾತ್ಮ. ಇಷ್ಟು ದಿನ ಭಟ್ರ ಹಾಡುಗಳಲ್ಲಿ ಅಡಗಿದ್ದ ತತ್ವಶಾಸ್ತ್ರ, 'ಡ್ರಾಮಾ'ದ ಕಥೆಯಲ್ಲಿ  ಬೆರೆತು ಇನ್ನು ಕೊಂಚ ಸಾಗಿ ಅಧ್ಯಾತ್ಮಿಕ ಅಂಶಗಳನ್ನ ಬೆರೆಸಿ ಪ್ರೇಕ್ಷಕರನ್ನ ಮತ್ತಷ್ಟು ಕಥೆಯೊಂದಿಗೆ ಒಡಗೂಡಿಸಿಕೊಳ್ಳುವ ತಂತ್ರ ಎನ್ನಬಹುದೇನೋ. ಆ ನಿಟ್ಟಿನಲ್ಲಿ ಚಿತ್ರಕಥೆ ಯಶಸ್ವಿಯಾಗಿದೆ.



ಯಶ್ ಸಾಹಸ, ನೃತ್ಯಗಳಲ್ಲಿ ಮಿಂಚಿ ಬರೀ ತುಂಡ್ ಅಭಿನಯ ಅನ್ಸ್ಕೊಳದೆ ಕ್ಲೈಮಾಕ್ಸ್ನಲ್ಲಿ ಅತ್ತು ಪರಿಪೂರ್ಣತೆ ಮೆರೆದಿದ್ದಾರೆ.
ಇನ್ನು ಸತೀಶ್ ಗೆ ಮತ್ತದೇ ಹಳ್ಳಿ ಸೊಗಡಿನ ಡೈಲಾಗ್ ಡೆಲಿವರಿಯಲ್ಲೇ ಸೈ ಎನಿಸಿಕೊಳ್ತಾರೆ. ರಾಧಿಕ ಪಂಡಿತ್ ರ ನಾಯಕಿಯ ಪಾತ್ರಕ್ಕೆ ಭಟ್ರು ಪುನಃ 'ನಂದಿನಿ' ಅನ್ನೋ ಹೆಸರಿಟ್ಟಿರುವುದು ಗಮನಿಸಬೇಕಾದ ಅಂಶ.ಪಂಡಿತ್ ಹಿಂದೆಂದಿಗಿಂತ ಮುದ್ದಾಗಿ ಕಾಣ್ತಾರೆ. ಸಿಂಧು ಲೋಕನಾಥ್ ಮೂಕಾಭಿನಯದಲ್ಲಿ ಮುಗ್ಧ ಲುಕ್ಸ್. ಸುಚೇಂದ್ರ ಪ್ರಸಾದ್ ಭಾವಾವೇಗದ ಕಾಲೇಜ್ ಪ್ರಾಂಶುಪಾಲರ ಜಟಿಲ ಪಾತ್ರವನ್ನ ಸಲೀಸಾಗಿ ಅಭಿನಯಿಸಿದ್ದಾರೆ. ಇನ್ನು ಅಂಬರೀಷ್ ಗೆ ಪರದೆಯ ಮೇಲೆ ವಿಶಿಷ್ಟ ಸ್ಥಾನ ಕಲ್ಪಿಸಲಾಗಿದೆ. ಬೊಂಬೆ ಶಾಸ್ತ್ರದವನ ಪಾತ್ರದಲ್ಲಿ ಅವರದು ಪ್ರಬುದ್ಧ ನಟನೆ.

ಮಳೆ ನಂತರ ಭಟ್ರು ಕಾಮೆರಮ್ಯಾನ್ ಕೃಷ್ಣ ಜೊತೆ ಕೆಲಸ ಮಾಡಿರೋದು ಇದರಲ್ಲೇ. ಸಾಕಷ್ಟು ಗ್ಯಾಪ್ ಆದರೂ ಅವರಿಬ್ಬರ ಜೋಡಿ ಮತ್ತೊಮ್ಮೆ ಕೆಲಸಮಾಡಿದೆ. ಕೃಷ್ಣ ಅಂದಮೇಲೆ ಸಾಕಷ್ಟು ಏರಿಯಲ್ ಮತ್ತು ಹ್ಯಾಂಡ್ ಹೆಲ್ಡ್ ಶಾಟ್ಸ್ ಇರಲೇಬೇಕು.
ಅವೇ ಒಮ್ಮೊಮ್ಮೆ ಕಥೆ ಹೇಳುತ್ತವೆ.ರವಿವರ್ಮ ಸಾಹಸದಲ್ಲಿ ಒಂದು ಫೈಟ್ ಮಜಬೂತಾಗಿ ಮೂಡಿಬಂದಿದೆ, ಏನೋ ನಿಜವಾಗಲು ಹೊಡೆದಾಡುತ್ತಿದ್ದಾರೆ ಎನ್ನುವಷ್ಟು. ಒಂದು ಬಿಟ್ ಅನ್ನು ಬಿಟ್ರೆ ಉಳಿದೆಲ್ಲ ಹಾಡುಗಳನ್ನು ಭಟ್ರೇ ಬರ್ದಿರೋದು ಅವರ ಪ್ರತಿಭೆಗೆ ಕನ್ನಡಿ. ಹರಿಕೃಷ್ಣ ಹಾಡುಗಳು ಮತ್ತು ಹಿನ್ನಲೆ ಸಂಗೀತ ಒಂದಕ್ಕೊಂದು ಸ್ಪರ್ಧೆಗೆ ಬಿದ್ದಂತೆ ಸಕ್ಕಾತಾಗಿ ಮೂಡಿಬಂದಿದೆ.

ಒಟ್ನಲ್ಲಿ ತುಂಡ್ ಹೈಕಳ ಸಾವಾಸ ಚೆನ್ನಾಗೈತೆ. ಮನರಂಜನೆಯ ರಸದೂಟ ಕೊಡೋದ್ರಿಂದ ಉಪವಾಸ ದೂರದ ಮಾತು. ಭಟ್ರು ಅಪರೂಪಕ್ಕೆ ಕಥೆ ಮಾಡವ್ರೆ .. ಕೊನೆಗ್ ಒಂದು ಅರ್ಥವತ್ತಾದ ಸಂದೇಶವಿದೆ. ಹೋಗಿ ನೋಡ್ಕೊಮ್ಬನ್ನಿ. !!!


~ಹೊಗೆ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ MOVIE REVIEW

ಬತ್ತಿಹೋದ ದೇಶಭಕ್ತಿಗೆ ರಾಯಣ್ಣ ಔಷಧಿ..

ಮೂವತ್ತು ಕೋಟಿ ಬಜೆಟ್, ಕನ್ನಡ ಚಿತ್ರರಂಗದಲ್ಲೇ ಅತೀ ದೊಡ್ಡ ಚಿತ್ರ ಎಂಬ ಹೆಗ್ಗಳಿಕೆ, ದರ್ಶನ್ ರಂಥ ಅಜಾನುಬಾಹು ದೇಹ ಮತ್ತು ಅಷ್ಟೇ ಮಟ್ಟದ ಪ್ರೇಕ್ಷಕವರ್ಗ ಹೊಂದಿರುವ ನಾಯಕನಟ, ಈಗಿನ ಮಟ್ಟಕ್ಕೆ ಅಪರೂಪ ಎನಿಸುವ ಐತಿಹಾಸಿಕ ವಿಷಯಾಧಾರಿತ ಕಥೆ, ಸಂಗೊಳ್ಳಿ ರಾಯಣ್ಣನಂಥ ಮೇರುಪುರುಷನ ಮೇಲಿನ ಕಥಾವಸ್ತು.. ಇಷ್ಟು ಸಾಕು ಒಂದು ಚಿತ್ರವನ್ನ 
ಅದ್ಭುತ ಎನಲು. ಆದರೆ ಈ ಅದ್ಭುತವನ್ನ ಅತ್ಯದ್ಭುತ ಮಾಡಲು ನಿರ್ದೇಶಕ ನಾಗಣ್ಣ ಎಡವಿದ್ದಾರೆ. 

ರಾಯಣ್ಣ ಕಿತ್ತೂರು ಸಂಸ್ಥಾನದ ವೀರರಾಣಿ ಚೆನ್ನಮ್ಮಳ ಬಲಗೈ ಭಂಟ. ಸಂಗೊಳ್ಳಿ ಅವನ ಊರು. ಕಥೆ ಆರಂಭವಾಗುವುದು
ಹೀಗೆ. ಬ್ರಿಟಿಷ್ ಅಧಿಕಾರಿ ಥ್ಯಾಕರೆ ರಾಣಿ ಚೆನ್ನಮ್ಮಳ ಬಳಿ ಕಪ್ಪ ಕೇಳಲು ಬರುತ್ತಾನೆ. ರಾಣಿಯು ಫೇಮಸ್ ಸ್ಕೂಲ್ ಫ್ಯಾನ್ಸಿ ಡ್ರೆಸ್ ಡೈಲಾಗ್ 'ನಿಮಗೇಕೆ ಕೊಡಬೇಕು ಕಪ್ಪ' ಎನ್ನುತ್ತಾಳೆ. ಥ್ಯಾಕರೆ ಸಾಹೇಬ ಅಪಮಾನಿತನಾಗಿ ಒಳಸಂಚು ನಡೆಸಿ ಯುದ್ಧಸಾರುತ್ತಾನೆ. ರಾಯಣ್ಣ ಮುಂದಾಳತ್ವದಲ್ಲಿ ಆ ಯುದ್ಧ ಗೆದ್ದು ಕಿತ್ತೂರು ಹರ್ಷೋದ್ಗಾರ ಮಾಡುತ್ತದೆ. ಆ ಯುದ್ಧದಲ್ಲಿ ಥ್ಯಾಕರೆ ಸತ್ತ ಪರಿಣಾಮ ಹೊಸ ಬ್ರಿಟಿಷ್  ಅಧಿಕಾರಿ ಬರುತ್ತಾನೆ. ಅವನು ಮತ್ತೊಂದು ಯುದ್ಧ ಸಾರಿ, ವಿರೋಧ ಪಕ್ಷದ ಕೆಲವರಿಗೆ ಹಣದಾಸೆ ತೋರಿಸಿ ಯುದ್ಧ ಗೆಲ್ಲುತ್ತಾನೆ. ರಾಣಿ, ರಾಯಣ್ಣ ಇತರ ಎಲ್ಲರೂ ಸೇರಿ ಬಂಧಿತರಾಗುತ್ತಾರೆ.
ಐದು ವರ್ಷದ ನಂತರ ರಾಯಣ್ಣ ಮತ್ತು ಇತರರು ಬಿಡುಗಡೆಗೊಳ್ತಾರೆ, ರಾಣಿ ಚೆನ್ನಮ್ಮನ ಹೊರತಾಗಿ. ಅಲ್ಲಿಯತನಕ ಕೇವಲ ವೀರನಾಗಿದ್ದ ರಾಯಣ್ಣ, ಅಲ್ಲಿಂದ ಕ್ರಾಂತಿಕಾರಿ ನಿಲುವುಗಳನ್ನು ತಾಳಿ ಕ್ರಾಂತಿವೀರನಾಗ್ತಾನೆ. ಗೆರಿಲ್ಲಾ ಮಾದರಿಯ ತಂತ್ರಗಳನ್ನು ಹೂಡಿ ಬ್ರಿಟಿಷರನ್ನು ಹೈರಾಣಾಗಿಸುತ್ತಾನೆ. ಕೊನೆಗೆ ಕೆಲ ದೇಶಭ್ರಷ್ಟರ ಕುಯುಕ್ತಿಯಿಂದ ಬ್ರಿಟಿಷರಿಗೆ ಸಿಕ್ಕಿ ಗಲ್ಲು
ಶಿಕ್ಷೆಗೆ ಒಳಗಾಗುತ್ತಾನೆ.


 
ಇಡೀ ಚಿತ್ರಕಥೆ ದೇಶಭಕ್ತಿಯ ಬದಲಾಗಿ ರಾಯಣ್ಣನೊಬ್ಬನನ್ನೇ ವೈಭವೀಕರಿಸುತ್ತದೆ. ಅದೇ ಇಲ್ಲಿ ದೊಡ್ಡ ಕಂದಕವಾಗುತ್ತದೆ.
ಬೇರೆ ಯಾವುದೇ ಒಂದು ಪಾತ್ರಕ್ಕೂ ಮಹತ್ವವೇ ಇಲ್ಲದಂತಾದಾಗ ಮೂರು ಗಂಟೆಗಳ ಕಾಲ ರಾಯಣ್ಣ ನಂಥ ರಾಯಣ್ಣನನ್ನೇ ನೋಡಲು ಬಹಳಷ್ಟು ಬೇಸರವಾಗುತ್ತದೆ. ಜಯಪ್ರದ ರಾಣಿಯ ಪಾತ್ರದಲ್ಲಿ ನೀರಸವಾಗಿ ತೋರುತ್ತಾರೆ. ಉಮಾಶ್ರೀ ಬರಿಯೆ ಒಂದೆರಡು ಪಂಚಿಂಗ್ ಡೈಲಾಗ್ಸ್ ಗೆ ಸೀಮಿತವಾಗುತ್ತಾರೆ. ಇನ್ನು ಶಶಿಕುಮಾರ್ ಸಾಕಷ್ಟು ಸಮಯಗಳ ಕಾಲ ಸ್ಕ್ರೀನ್ ಮೇಲೆ ಕಂಡರೂ ಅವರ ಪಾತ್ರಕ್ಕೆ ಮಹತ್ವವೇ ಇಲ್ಲ. ಇನ್ನು ನಾಯಕಿ ಹಣೆಪಟ್ಟಿ ಹೊತ್ತ ನಿಖಿತಾ ಅಂತೂ ಐಟಂ ಡ್ಯಾನ್ಸರ್ ನಂತೆ  ಒಂದು ಹಾಡಿಗೆ ಮಾತ್ರ ಬಂದು ಹೋಗ್ತಾರೆ.

ಐದು ವರ್ಷದ ನಂತರವೂ ಹುಡುಗನೊಬ್ಬ ದೊಡ್ದವನಾಗದಿರುವುದು, ರಾಯಣ್ಣನ ವಿಗ್ ನೀರಿನ ಫೈಟ್ ನಲ್ಲೂ ಒದ್ದೆಯಾಗದೆ ಇರುವುದು ಹೀಗೆ ಸಾಕಷ್ಟು ಋಣಾತ್ಮಕ ಅಂಶಗಳನ್ನು ಹೊಂದಿದ್ದರು 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಒಂದು ಅಸಾಧಾರಣ ಚಿತ್ರ. ಇಲ್ಲಿ ಮೊದಲು ಸ್ಮರಿಸಬೇಕಿರುವುದು ಕೆಚ್ಚೆದೆಯ ನಿರ್ಮಾಪಕರಾದ ಆನಂದ ಅಪ್ಪುಗೊಳ್ ರವರನ್ನ. ಹಿಂದೆಂದೂ ಮಾಡಿರದ ಶೈಲಿಯಲ್ಲಿ ಚಿತ್ರವನ್ನು  ಕನ್ನಡ ಪ್ರೇಕ್ಷಕರ ಮುಂದೆ ತಂದಿದ್ದಾರೆ. ದರ್ಶನ್ ಕೂಡ ಸಾಕಷ್ಟು ಶ್ರಮವಹಿಸಿದ್ದಾರೆ. ಪೋಷಾಕಿನಲ್ಲಿ ನೋಡಲು ರಾಯಣ್ಣನ ಅಪರಾವತಾರ. ಧ್ವನಿಯೇರಿಸಿ ಡೈಲಾಗ್ಸ್ ಹೇಳಿದರೆ ಮಾತ್ರ ಅದು ಅಭಿನಯ ಅಂತ ನಿರ್ದೇಶಕರು ಭಾವಿಸಿದ್ದಾರೇನೋ ಎಂದು ಒಮ್ಮೊಮ್ಮೆ ಅನಿಸಿದರೆ ಅದು ದರ್ಶನ್ ತಪ್ಪಲ್ಲ.

ಇಂಥ ಮಹಾನ್ ಚಿತ್ರಕ್ಕೆ ತಕ್ಕ ಸಂಗೀತ, ಕ್ಯಾಮೆರ ಕೆಲಸ ಇಲ್ಲದಂತಾಗಿದೆ. ಅಥವಾ ಜನರ ನಿರೀಕ್ಷೆಗೆ ತಕ್ಕುದಾಗಿಲ್ಲ.
ಆದರು ನಮ್ಮ ಬತ್ತಿಹೋದ ದೇಶಭಕ್ತಿಗೆ ಈ ಚಿತ್ರ ಒಂದು ಔಷಧಿ. ಸಂಗೊಳ್ಳಿ ರಾಯಣ್ಣ ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹೋಗಿ ನೋಡಿ. ಕ್ಲೈಮಾಕ್ಸ್ ನಲ್ಲಿ ಕಣ್ಣಲ್ಲಿ ನೀರು ಜಿನಿಗೋದ್ ಖಂಡಿತ.

>>>>

~ಹೊಗೆ