PARIE KANNADA MOVIE - REVIEW

ಈ 'ಪರಿ'ಯ ಕಿರಿಕಿರಿ..

ಸದಭಿರುಚಿಯ ಚಿತ್ರ ಎಂದು  ಬಿಡುಗಡೆಯ ಮುನ್ನವೇ  ಹಣೆಪಟ್ಟಿಯನ್ನು ಹೊತ್ತುಕೊಂಡ ಈ ಚಿತ್ರ ಸಕಲ ರೀತಿಯಲ್ಲೂ  ನಿರಾಶೆ ಮೂಡಿಸುವುದು ಕನ್ನಡ ಪ್ರೇಕ್ಷಕನಿಗೆ  ವಿಪರ್ಯಾಸವೆ ಸರಿ. ಬಿಡಿಟಿ ಬ್ಯಾನರ್ನ ಪ್ರಥಮ ಕಾಣಿಕೆ , ಸಂಪನ್ನ ಮುತಾಲಿಕ್ ರ ಕಾದಂಬರಿಯನ್ನು ಆಧರಿಸಿ ಹೊರತಂದಿರುವ ಈ ಚಿತ್ರದಲ್ಲಿ ಮಿಸ್ಸಾಗಿರುವುದು ಒಂದು ಗಟ್ಟಿ ಚಿತ್ರಕಥೆ.



ಬ್ರಾಹ್ಮಣ ಹುಡುಗ 'ಭಾರದ್ವಾಜ' (ರಾಕೇಶ್) ಕೆಳವರ್ಗದ ಯುವತಿ 'ಪರಿ' ಯ (ನಿವೇದಿತ) ಪ್ರೇಮಸಮುದ್ರದಲ್ಲಿ ಬಿದ್ದು  ನಂತರ ಪರಿಯನ್ನು ಪಡೆಯಲು ಜನಿವಾರವನ್ನು ಒಗೆದು ನಾಯಕಿಯ ತಂದೆ ಮಾಡುವ 'ಕಳ್ಳ ಸಾರಾಯಿ' ದಂಧೆಯಲ್ಲಿ ಪ್ರವೀಣನಾಗಿ ಅವಳ ತಂದೆಯ ಮೆಚ್ಚುಗೆಗೆ ಪಾತ್ರವಾದರೂ ಕೊನೆಗೆ ಅವಳ ತಂದೆ ನಾಯಕಿಯನ್ನು 
ಮತ್ತೊಬ್ಬನಿಗೆ  ಕೊಟ್ಟು ಮದುವೆ ಮಾಡಲು ಹೋದಾಗ ಈ ಭಾರದ್ವಾಜ ನಾಯಕಿಯ ತಂದೆ ಮಾತಿಗೆ ಬೆಲೆ ಕೊಟ್ಟು 
ಪರಿಯನ್ನು ತ್ಯಜಿಸಿ ತೆರಳುತ್ತಾನೆ.  ಸುಮೇಧಾ (ಹರ್ಷಿಕ ಪೂರ್ನಚ್ಚ) ಬಳಿಗೆ. ಆಕೆ ಒಂದು ದೊಡ್ಡ ಡಿಸ್ಟಿಲರಿಯ  ಓನರ್. ಅಲ್ಲಿ ತನ್ನ ಕಳ್ಳ ಸಾರಾಯಿ ದಂಧೆಯ ಪ್ರಾವಿಣ್ಯತೆಯನ್ನೇ ತೋರಿ 'ಭಾರದ್ವಾಜ' ಅವಳ ಪ್ರೀತಿಗೂ ಪಾತ್ರನಾಗುತ್ತಾನೆ. ಇನ್ನುಳಿದ ಪರಿಯ ಕಥೆ ಬರಿಯೇ ಕಲಸುಮೇಲೋಗರ.

ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ಕಥೆಯ ಹಿಡಿತ ಸಿಕ್ಕಿಲ್ಲವೆಂದು ಮೊದಲಾರ್ಧದಲ್ಲೇ ತಿಳಿಯುತ್ತದೆ. 'ಮುಗಿಲಿನ ಮಾತು ಮುಸಲಧಾರೆ' ಹಾಡಿನ ಮೂಲಕ ವೀರ್ ಸಮರ್ಥ್ ರವರ ಸಂಗೀತ ಇಷ್ಟವಾಗುತ್ತದೆ. ಅನಂತ್ ಅರಸ್ ರವರ ಕ್ಯಾಮೆರಾದ ಏರಿಯಲ್ ಶಾಟ್ಸ್ ಕೆಲವು ಸುಂದರ ದೃಶ್ಯಗಳನ್ನೂ ಸೆರೆಹಿಡಿದಿದೆ.

ಚಿತ್ರದ ವಿಶೇಷ ಎಂದರೆ ಮೂರು ಜನ 'ಪದ್ಮಶ್ರೀ'ಗಳು ಇಲ್ಲಿ ಕೆಲಸ ಮಾಡಿರುವುದು. ಎಂ.ಎಸ್ ಸತ್ಯು ರವರ ಕಲೆ, ನಿಮಾಯ್ ಘೋಷ್ ರ ಸ್ಥಿರ ಛಾಯಾಗ್ರಹಣ, ಉಷಾ ಉತ್ತುಪ್ ರ ಹಾಡುಗಾರಿಕೆ ಇದ್ದರೂ ಅವೆಲ್ಲ ಚಿತ್ರಕ್ಕೆ ಕಳೆ ತರುವಲ್ಲಿ  ಹೆಚ್ಚಾಗಿ ಕೆಲಸ ಮಾಡಿಲ್ಲ. 'ಮರಳಿ ಮರೆಯಾಗಿ' (ಸವಾರಿ) ಅಂತ ಭಾವಪೂರ್ಣ ಹಾಡುಗಳನ್ನು ಕೊಟ್ಟ ಸುಧೀರ್ ಅತ್ತಾವರ್ ತಮ್ಮ ಮುಂದಿನ ಚಿತ್ರಗಳಲ್ಲಾದರೂ ಎಚ್ಚೆತ್ತುಕೊಳ್ಳಲಿ ಅಥವಾ ಪುನಃ ಗೀತ ಸಾಹಿತ್ಯಕ್ಕೆ ಮರಳಲಿ.

DASHAMUKHA COMPLETE REVIEW..

ಹತ್ತು ಜನ್ಮಕ್ಕಾಗೋ ಅಷ್ಟು ಸಹನೆ ಇದ್ದರೆ 'ದಶ'ಮುಖ ನಿಮಗೆ ಸಹಿಸುತ್ತೆ.

ಸೆನ್ಸಾರ್ ಬೋರ್ಡ್ ನಿಂದ ಸದಾ 'ಎ' ಸ್ವೀಕರಿಸುತ್ತಿದ್ದ ನಿರ್ದೇಶಕ ರವಿ ಶ್ರೀವತ್ಸ ಈ ಬಾರಿ 'ಯುಎ' ತೆಗೆದುಕೊಂಡಿರುವುದೇ 
ಈ ಚಿತ್ರದ ಅವರ ಬಹು ದೊಡ್ಡ ಸಾಧನೆ. 1957 ರಲ್ಲಿ ಬಂದ ಇಂಗ್ಲೀಷಿನ '12 ಆಂಗ್ರಿ ಮೆನ್' ಹಿಂದಿಯಲ್ಲಿ 'ಏಕ್ ರುಕಾ ಹುವಾ ಫೈಸಲಾ' ಆಗಿತ್ತು. ಕನ್ನಡದಲ್ಲಿ 'ದಶಮುಖ'ನಾಗಿ ಬಂದಿದೆ.

ಒಂದು ಕೊಲೆ ಪ್ರಕರಣವನ್ನು ನಮ್ಮ ನ್ಯಾಯಾಲಯ ಬಗೆಹರಿಸಲಾಗದೆ ಹತ್ತು ಜನ ಸಾಮಾನ್ಯರನ್ನು ಗುರುತಿಸಿ ಅವರಿಗೆ 
ಆ ಗುರುತರ ಜವಾಬ್ದಾರಿಯನ್ನು ವಹಿಸಿಬಿಡುತ್ತೆ. ಈ ರೀತಿ 'ಜ್ಯೂರಿ ಸಿಸ್ಟಂ' ನಮ್ಮ ಸಂವಿಧಾನದಲ್ಲಿ  ಇಲ್ಲದಿದ್ದರೂ ಒಂದು ಸಿನಿಮಾ ಮಟ್ಟಿಗೆ ಪ್ರೇಕ್ಷಕ ಸಹಿಸಿಕೊಳ್ಳಬಹುದು. ಪ್ರಕರಣವನ್ನು ಬಗೆಹರಿಸಲು ಬರುವ ಹತ್ತು ಜನರು ವಿವಿಧ ಹಿನ್ನಲೆಯುಳ್ಳವರೂ, ಬೇರೆ ಬೇರೆ ಪೀಳಿಗೆಯವರು. ನಿಜ ಹೇಳ್ಬೇಕು ಅಂದ್ರೆ ಪ್ರತಿಯೊಬ್ಬರದೂ ಅವರದೇ ಆದ ಒಂದು ತಲೆ ಪ್ರತಿಷ್ಟೆ. ಅಂತ ಮಹಾಸಮಾಗಮದ 2  ಗಂಟೆಗಳ ಕಾಲದ ರೌಂಡ್ ಟೇಬಲ್ ಮೀಟಿಂಗ್ ಏ ಈ ದಶಮುಖ.

ಹುಡುಗನೊಬ್ಬ ತನ್ನ ತಂದೆಯನ್ನೇ ಕೊಂದ ಆರೋಪದ ಮೇರೆಗೆ ಬಂಧನಗೊಳಗಾಗುತ್ತಾನೆ. ಇದನ್ನು ಬಗೆಹರಿಸಲು ಬರುವ ಈ ಹತ್ತು ಜನರಲ್ಲಿ ಒಂಭತ್ತು ಜನ ಆರೋಪಿಯನ್ನು ಅಪರಾಧಿ ಎಂದರೆ ಕ್ರೇಜಿಸ್ಟಾರ್ ರವಿಚಂದ್ರನ್ ಮಾತ್ರ ಅವನನ್ನು ನಿರಪರಾಧಿಯೆಂದು ಹೇಳಿ ಕಥೆಗೆ ನಾಂದಿ ಹಾಡುತ್ತಾರೆ. ಚಿತ್ರ ಸಾಗುತ್ತ ಮಿಕ್ಕಿದ ಒಂಭತ್ತು ಜನರನ್ನು ತಮ್ಮ ವಾದದ ಮೂಲಕ ರವಿ ಹೇಗೆ ಕೇಸನ್ನೇ ಉಲ್ಟಾ ಹೊಡೆಸುತ್ತಾರೆ ಎಂದು ಚಿತ್ರಮಂದಿರದಲ್ಲಿ ನೋಡಿ. ಶ್ರೀಧರ್ ಸಂಭ್ರಮ್ ಸಂಗೀತ ಡಲ್ ಹೊಡೆದರೆ ಸಾಧು ಕೋಕಿಲ ಹಿನ್ನಲೆ ಸಂಗೀತ ಅಲ್ಲಲ್ಲಿ ಅವರ ಪ್ರತಿಭೆಗೆ ಕನ್ನಡಿ ಹಿಡಿಯುತ್ತದೆ. ಲಕ್ಷ್ಮಣ್ ರೆಡ್ಡಿಯ ಕತ್ತರಿ ಕೆಲಸ ಕೆಲವೆಡೆ ಕಳೆ ಕೊಡುತ್ತದೆ.

ರವಿ ಸರ್ ಜೊತೆ ದೇವರಾಜ್, ಅನಂತನಾಗ್, ದತ್ತಣ್ಣ, ಅವಿನಾಶ್, ಮಾಳವಿಕಾ, ಅಚ್ಯುತ್ ರಾವ್, ರವಿ ಕಾಳೆ ಇತರ ಜ್ಯೂರಿಗಳಾಗಿ ಅಭನಯಿಸಿದ್ದಾರೆ. ಬಹಳ ದಿನಗಳ ನಂತರ ಫೀಲ್ಡ್  ಗೆ ಬಂದಿರುವ ಸರಿತಾ ಅಭಿನಯ ಮರೆತಿಲ್ಲ. ಆರೋಪಿಯ ಪಾತ್ರದಲ್ಲಿ ಬಿರುಗಾಳಿ ಚೇತನ್ ಇದ್ದು, ಅವನ ಪ್ರೇಯಸಿಯಾಗಿ ಆಕಾಂಕ್ಷಾ ಮನ್ಸುಖಾನಿ ಇದ್ದಾರೆ.

ಮಾಥ್ಯೂ ರಾಜನ್ ರವರ ಕ್ಯಾಮೆರಗೆ  ಹೆಚ್ಚು ಕೆಲಸವಿಲ್ಲ. ಕಾರಣ ಬರಿಯ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಈ ಸಿನಿಮಾದಲ್ಲಿ  ತರ್ಕ ವಾದಗಳಿಗೆ ಹೆಚ್ಚು ಒತ್ತು . ಆದರೆ ಅದೇ ತರ್ಕಗಳಲ್ಲಿ ಹುರುಳಿಲ್ಲದಾಗ ಪ್ರೇಕ್ಷಕನಿಗೆ ನಿರಾಸೆಯಾಗತ್ತೆ. ಉದಾಹರಣೆಗೆ - ಆರೋಪಿಯ ಪಾತ್ರದ ಚೇತನ್ ಅವನ ತಂದೆಯ ಪಾತ್ರದಲ್ಲಿ ಬರುವ ಹಿರಿಯ ನಟ ಸುದರ್ಶನ್ ಇವರಿಬ್ಬರ ನಡುವೆ ಎತ್ತರದ ಅಂತರ ಕೇಸಿನ ಪ್ರಮುಖ ಸಾಕ್ಷಿಗಳಲ್ಲಿ ಒಂದು. ಆದರೆ ಅದೇ ಚೇತನ್ 5 ' 4 " ಮತ್ತು ಸುದರ್ಶನ್ 6 ' 2  "  ಎತ್ತರ ಇದ್ದಾರೆ ಎನ್ನುವುದು ಚೇತನ್ ನನ್ನು ನೋಡಿದ ಯಾವ ದಡ್ಡನೂ ನಂಬುವುದಿಲ್ಲ.   ಚಿತ್ರ ನಿಜವಾಗಲು ಒಂದು ವಿಭಿನ್ನ ಪ್ರಯತ್ನವಾದರೂ ಕನ್ನಡ ಪ್ರೇಕ್ಷಕನ ನಾಡಿಗೆ ತಕ್ಕುದಾದದಲ್ಲ.

ದಶಮುಖ ಎಂಥಹಾ ತಲೆನೋವು ಮುಲಾಮಿಗಾದರೂ  ಸವಾಲ್ ಒಡ್ಡುತ್ತೆ  ಅಂತಾನೆ 
ಮೊದಲ ದಿನದ  ಪ್ರೇಕ್ಷಕ..  

~ ಹೊಗೆ

bheema teeradalli REVIEW.. a complete look

ಭೀಮಾ ತೀರದಲ್ಲಿ ಒಂದು ವ್ಯಘ್ರ 'ರಕ್ತ'ಚರಿತ್ರೆ...

ಚಂದಪ್ಪ ಹರಿಜನ. ಈತ ಮೇ, 2000 ರಲ್ಲಿ ಪೋಲಿಸ್ ಗನ್ನಿಗೆ ಬಲಿಯಾದ. ಪೋಲಿಸ್ ದಾಖಲೆಯ ಪ್ರಕಾರ ಇವನೊಬ್ಬ ನರಹಂತಕ. ಅವನ ಪ್ರಕಾರ ಅವನು ಅನ್ಯಾಯದ ವಿರುದ್ಧ ಹೋರಾಡುವ ಕ್ರಾಂತಿಕಾರಿ.
ಇದೇ ಎಳೆಯನ್ನು ಆಧರಿಸಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಓಂ ಪ್ರಕಾಶ್ ರಾವ್.




ಸೆನ್ಸಾರ್ ಮಂಡಳಿ  'ಎ' ಪ್ರಮಾಣ ಪತ್ರ ಕೊಟ್ಟಿರುವುದು ಸರಿಯಷ್ಟೆ. ಕಥೆಗೆ ತಕ್ಕಂತೆ ಚಿತ್ರಕತೆ ಇದ್ದರೂ ಅತಿಯಾದ ರಕ್ತಪಾತ ಪ್ರೇಕ್ಷಕರಿಗೆ ಚಿಟ್ಟು ಹಿಡಿಸಬಹುದು. ಚಿತ್ರದ ಮೊದಲಾರ್ಧ ನಿಧಾನಗತಿಯಲ್ಲಿ ಸಾಗುವುದೇ ಮೇಜರ್ ಡ್ರಾಬ್ಯಾಕ್.
ಆದರೆ ನಿಮಗೆ ಅಲ್ಲಲ್ಲಿ ಸಿಗುವ ಪಾತ್ರಗಳು, ಅದರ ದೃಶ್ಯ ವೈಭವ, ಕೆಲವು  ಮೈನವಿರೇಳಿಸುವ ಡೈಲಾಗ್ ಗಳು ನಿಮ್ಮನ್ನು ರೋಮಾಂಚನಗೊಳಿಸಿ ಸಿನಿಮಾಗೂ ನಿಮಗೂ ಜೀವ ಕೊಡುತ್ತದೆ.


ಓಂ ಪ್ರಕಾಶ್ ರಾವ್ ನಿರ್ದೇಶಕನಾಗಿ ಗೆಲ್ಲುವುದು ಪಾತ್ರ ವಿಜೃ೦ಭಣೆಯಲ್ಲಿ , ಚಿತ್ರದಲ್ಲಿ ಕೊಡುವ ಸಂದೇಶದಲ್ಲಿ ಮತ್ತು ಕಥಾವಸ್ತುವಿನ ಆಯ್ಕೆಯಲ್ಲಿ. ಚಿತ್ರದಲ್ಲಿ ಹೇಳಿಕೊಳ್ಳುವಂತ ಕಥೆಯಿಲ್ಲ. ಮೇಲೆ ಹೇಳಿದ ಒನ್ ಲೈನ್ ಎಳೆಯಲ್ಲಿ ಕಥೆ ಮಾಡಿದ್ದಾರೆ. ಶೇಕಡಾ ಎಂಭತ್ತು ಭಾಗ ಉತ್ತರ ಕರ್ನಾಟಕ ಭಾಷೆಯಲ್ಲಿ ಸಂಭಾಷಣೆ ಇರುವುದು ಶ್ಲಾಘನೀಯ ಪ್ರಯತ್ನ. ಅಲ್ಲಲ್ಲಿ ಭಾಷೆ ಕೃತಕವಾಗಿ ಕಂಡರೂ ಅವರ ಪ್ರಯತ್ನ ಮೆಚ್ಚುವಂಥದ್ದು.


ದುನಿಯಾ ವಿಜಯ್ ಗೆ ಹೇಳಿ ಮಾಡಿಸಿದ ಪಾತ್ರ. ಚಂದಪ್ಪನ ಪಾತ್ರಕ್ಕೆ  ಚಂದಗೆ ಒಪ್ಪುತ್ತಾರೆ. ನಾಯಕಿ ಪಾತ್ರದಲ್ಲಿ ಪ್ರಣಿತ ಇದ್ದು ಕಥೆ ಮತ್ತು ಅದರ ನೇಟಿವಿಟಿ ಗೆ ಖಂಡಿತಾ ಅವರ ಬಣ್ಣ, ಉಡುಗೆ-ತೊಡುಗೆ ಒಪ್ಪುವುದಿಲ್ಲ. ಉಳಿದಂತೆ ತಾರಾಗಣದಲ್ಲಿ ಶರತ್ ಲೋಹಿತಾಶ್ವ, ಲೋಕನಾಥ್, ದೊಡ್ಡಣ್ಣ, ಗುರುರಾಜ್ ಹೊಸಕೋಟೆ, ರಾಜು ತಾಳಿಕೋಟೆ, ಶ್ರೀನಿವಾಸಮೂರ್ತಿ, ಸುಚೇಂದ್ರ ಪ್ರಸಾದ್, ಹೊಸ ಪರಿಚಯ 'ಪ್ರತಾಪ್ ರೆಡ್ಡಿ' ಇದ್ದಾರೆ. ಅವರವರ ಪಾತ್ರಕ್ಕೆ ತಕ್ಕಂತೆ ಸಿನಿಮಾದಲ್ಲಿ ಅವರು ಕಿರುಚಾಡುತ್ತಾರೆ. ವ್ಯಘ್ರರಾಗುತ್ತಾರೆ. ಈ ಎಲ್ಲಾ ಘಟಾನುಘಟಿಗಳ ಮಧ್ಯೆ ನಾಯಕನ ತಾಯಿಯ ಪಾತ್ರದಲ್ಲಿ  ಉಮಾಶ್ರಿ ಮಿಂಚುತ್ತಾರೆ. ಪ್ರೇಕ್ಷಕರಿಂದ ಶಿಳ್ಳೆ - ಚಪ್ಪಾಳೆ ಗಳಿಸುತ್ತಾರೆ. 'ಮಾನ್ಯ' ಅಬಕಾರಿ ಸಚಿವ ರೇಣುಕಾಚಾರ್ಯ ಚಿತ್ರದಲ್ಲಿ ಡಿಸಿಪಿ.
  
" ಗಂಡ್ ಮಕ್ಕಳಿಗೆ ಗಂಡ್ಸಾಗೋದು ಹೇಗೆ ಅಂತ ಪಾಠ ಹೇಳ್ಕೊಡ್ಬೇಕಿಲ್ಲ" ಇಂತ ಹಲವು ಪಂಚಿಂಗ್ ಸಾಲುಗಳು ಚಿತ್ರದಲ್ಲಿ ಇದೆಯಂದರೆ ಅದರ ರೂವಾರಿ ಎಂ.ಎಸ್.ರಮೇಶ್ . ಅಣಜಿ ನಾಗರಾಜ್ ಚಿತ್ರಕ್ಕೆ ಹಣ ಹಾಕಿ ಹಲವು ದಿನಗಳ ನಂತರ ಕ್ಯಾಮೆರಾ ಹಿಂದೆ ಕೂಡ ಕೆಲಸ ಮಾಡಿದ್ದಾರೆ. ದ್ವಿತೀಯಾರ್ಧದಲ್ಲಿ ಅವರ ಕ್ಯಾಮೆರ ಹಿಂದಿನ ಶ್ರಮ ಕಾಣುತ್ತದೆ. ಪದೇ ಪದೇ ಸೂರ್ಯನ ಕಿರಣದ ಬ್ಯಾಕ್ ಡ್ರಾಪ್ ನಲ್ಲಿ ಪಾತ್ರಗಳನ್ನು ಸೆರೆಹಿಡಿದ್ದಾರೆ. ಅಭಿಮಾನ್ ರಾಯ್ ಸಂಗೀತಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲ. ಏಕೆಂದರೆ ಚಿತ್ರದಲ್ಲಿ ಇರುವುದು ಎರಡೇ  ಹಾಡುಗಳು. ಹಿನ್ನಲೆ ಸಂಗೀತವಂತೂ 'ರಕ್ತ ಚರಿತ್ರ' ದ ಡಿಟ್ಟೋ ಎಂದು ಜನ ಮಾತನಾಡಿ ಕೊಳ್ಳುತ್ತಿದ್ದಾರೆ.


ದೃಶ್ಯಾವಳಿಗಳು ರಕ್ತಸಿಕ್ತವಾಗಿದ್ದರೂ ಅದರ ಒಡನೆಯೇ ಇರುವ ಸಂದೇಶ ಉತ್ತಮವಾಗಿದೆ. ಹಿಂಸೆಯಿಂದ ಕ್ರಾಂತಿ ಮಾಡಿದವನ ಹೆಂಡತಿ ಯಾವತಿದ್ದರೂ ವಿಧವೆಯೇ. ನೀವು ಕ್ರಾಂತಿಕಾರರಾಗಿದ್ದಾರೆ ಸಮಾಜದಲ್ಲೇ ಇದ್ದು ಮಾಡಿ ಎನ್ನುವುದು ಈ ಚಿತ್ರ ಕೊಡುವ ತೂಕದ ಸಂದೇಶ.


~ ಹೊಗೆ

ANNA BOND MUSIC EXCLUSIVE REVIEW

"ತುಂಬಾ ನಿರೀಕ್ಷೆ ಇಟ್ಕೋಬೇಡಿ.. ಬೇಜಾರಾಯ್ತದೆ.. "

೨೦೧೨ ರ ಬಹು ನಿರೀಕ್ಷಿತ 'ಅಣ್ಣಾ ಬಾಂಡ್' ಚಿತ್ರದ ಆಡಿಯೋ ಏಪ್ರಿಲ್ ೨ ರಂದು ಬಿಡುಗಡೆಯಾಗಿದೆ. ಹರಿಕೃಷ್ಣ ಸಂಗೀತವಿರುವ ಈ ಚಿತ್ರದಲ್ಲಿ ಐದು ಹಾಡುಗಳಿವೆ. ಅದರಲ್ಲಿ ನಾಲ್ಕು ಹೊಸ ಹಾಡುಗಳಿದ್ದು, ಐದನೆಯದು ಚಲಿಸುವ ಮೋಡಗಳು ಚಿತ್ರದ ಸ್ವತಃ ಪುನೀತ್ ರವರೇ ಹಾಡಿದ್ದ  'ಕಾಣದಂತೆ ಮಾಯವಾದೇನೋ' ಗೀತೆಯನ್ನು ರೀಮಿಕ್ಸ್ ಮಾಡಲಾಗಿದೆ.
ಮೊದಲ ಬಾರಿಗೆ ಹಾಡುಗಳನ್ನು ಕೇಳಿದಾಗ ಕೆಲವು ಗೀತೆಗಳಲ್ಲಿ 'ಪರಮಾತ್ಮ'ನ ಛಾಯೆ ಇದೆಯಂದು ಅನಿಸುವುದು ಸಹಜ.
ಆಡಿಯೋ ಬಿಡುಗಡೆಯಾಗುವ ಮುಂಚೆಯೇ 'ತುಂಬಾ ನೋಡಬೇಡಿ, ಲವ್ವು ಆಯ್ತದೆ' ಗೀತೆ ಸಾಕಷ್ಟು ಹೆಸರು ಮಾಡಿತ್ತು. ಅದರಂತೆ ಅದೇ ಹಾಡು ಎಲ್ಲರ ಬಾಯಲ್ಲಿ ಸದ್ಯದಲ್ಲೇ ಗುನುಗುವ ಎಲ್ಲ ನಿರೀಕ್ಷೆ ತೋರಿದೆ.
ಚಿತ್ರದ ಪ್ರತಿಯೊಂದು ಹಾಡಿನ ಬಗ್ಗೆ ವಿಮರ್ಶೆ ಮಾಡಿ ನಿಮ್ಮ ಮುಂದೆ ಇಟ್ಟಿದೇವೆ.


೧. ಬೋಣಿ ಆಗದ ಹೃದಯಾನ  (ಸಾಹಿತ್ಯ : ಯೋಗರಾಜ್ ಭಟ್, ಗಾಯನ : ಟಿಪ್ಪು)
ಭಟ್ಟರು ಪರಮಾತ್ಮದಲ್ಲಿ 'ಯಾವನಿಗೊತ್ತು' ಎಂದು ಬರೆದು, ಇಲ್ಲಿ 'ಬೇಕಿತ್ತಾ ಬೇಕಿತ್ತಾ' ಎಂದು ಲವ್ ಬಗ್ಗೆ ಗೀಚಿದ್ದಾರೆ. ಎರಡೂ ಗೀತೆಗಳು ಒಂದೇ ಥರ ಕೇಳಿಸುತ್ತದೆ. ಆದರೆ ಟಿಪ್ಪು ಧ್ವನಿ ನಿಮ್ಮನ್ನು ಮೋಡಿ ಮಾಡಿಬಿಡುತ್ತದೆ. ಚಿತ್ರದ ಆಲ್ಬಮ್ ನಲ್ಲಿ ಈ ಹಾಡಿಗೆ ಎರಡನೆಯ ಸ್ಥಾನ ಕೊಡಬಹುದು.

೨. ಏನೆಂದು ಹೆಸರಿಡಲಿ (ಸಾಹಿತ್ಯ : ಜಯಂತ್ ಕಾಯ್ಕಿಣಿ , ಗಾಯನ : ಸೋನು ನಿಗಮ್, ಶ್ರೇಯಾ ಘೋಶಾಲ್)
 ಹಾಡು ಶುರುವಾದಾಗ ನಿಮಗೆ ಇದು 'ಆಡಿಸಿ ನೋಡು ಬೀಳಿಸಿ ನೋಡು' ಅಂತ ಅನ್ನಿಸಿದರೆ ಆಶ್ಚರ್ಯವಿಲ್ಲ. ಚಿತ್ರದ ಓನ್ಲಿ ಮೆಲೋಡಿ ಟ್ರ್ಯಾಕ್ ಇದು. ಕಾಯ್ಕಿಣಿ ಸರ್ ಎಂದಿನಂತೆ ಅಪರೂಪದ ಪದಗಳನ್ನು ಹಾಡಿಗೆ ಪೋಣಿಸಿದ್ದಾರೆ. ಸದ್ಯಕ್ಕೆ ಮೂರನೇ ಸ್ಥಾನದಲ್ಲಿದ್ದರೂ ಜನ ಮೇಲಿಂದ ಮೇಲೆ ಕೇಳುತ್ತ ಮೊದಲ ಸ್ಥಾನಕ್ಕೆ ತಂದು ನಿಲ್ಲಿಸುವ ತಾಕತ್ತು ಈ ಹಾಡಿಗಿದೆ.

೩. ಕಾಣದಂತೆ ಮಾಯವಾದೆನೋ (ಸಾಹಿತ್ಯ : ಚಿ. ಉದಯಶಂಕರ್, ಗಾಯನ : ಪುನೀತ್ ರಾಜ್ ಕುಮಾರ್ )
ಪುಟ್ಟ ಬಾಲಕನ ಧ್ವನಿಯಲ್ಲೇ ಈ ಹಾಡು ಚೆಂದ ಕೇಳಿಸುತ್ತದೆ. ಆದರೂ ಪುನೀತ್ ಅಭಿಮಾನಿಗಳಿಗೆ ನಿರಾಶೆ ಮಾಡಬಾರದೆಂದು ನಿರ್ಧರಿಸಿರುವ ನಿರ್ದೇಶಕ 'ಸೂರಿ'ಯ ಈ ಪ್ರಯತ್ನಕ್ಕೆ ಅಭಿಮಾನಿಗಳ ಪರವಾಗಿ ವಂದನೆಗಳು. ಅತ್ಯುನ್ನತ ಮತ್ತು ತೂಕವಾದ ಸಾಹಿತ್ಯ ಹೊಂದಿರುವ ಈ ಗೀತೆಗೆ ರಿಮಿಕ್ಸ್ ಎಂಬ ಒಂದೇ ಕಾರಣದಿಂದ ಐದನೆಯ ಸ್ಥಾನದಲ್ಲಿ ಇರಿಸಲಾಗಿದೆ.

೪. ಹಿ ಇಸ್ ಅಣ್ಣಾ ಬಾಂಡ್ (ಸಾಹಿತ್ಯ : ಯೋಗರಾಜ್ ಭಟ್, ಗಾಯನ : ರಂಜಿತ್, ನವೀನ್, ರಮ್ಯ)
ಬಾಂಡ್ ಶೈಲಿಯ ಸಂಗೀತ ಹೊಂದಿರುವ ಈ ಹಾಡು ನಿಮಗೆ ಒಂದು ರೀತಿಯ ಜೋಶ್ ಕೊಡುವಲ್ಲಿ ಯಶಸ್ವಿಯಾಗುತ್ತದೆ. ಆ ತೆರನಾದ ಬೀಟ್ಸ್ ಇದರಲ್ಲಿದೆ. ಈ ಹಾಡಿಗೆ ಪುನೀತ್ ಹೇಗೆ ಹೆಜ್ಜೆ ಹಾಕಿದ್ದಾರೋ, ಖಂಡಿತ ಮಕ್ಕಳಿಗೆ ಹುಚ್ಚು ಹಿಡಿಸುತ್ತಾರೆ ಎಂದನಿಸುತ್ತದೆ. 'ಗೊಗ್ಗಯಂಗೆ ಗಾಡ್ ಫಾದರ್ ಅಣ್ಣಾ ಬಾಂಡ್, ಕಾಗೆ ಗುಬ್ಬಿ ಸ್ಟೋರಿಯಲ್ಲೂ ಅಣ್ಣಾ ಬಾಂಡ್' ಹೀಗೆ ಬರುವ ಸಾಲುಗಳು ಶೇಕಡಾ ನೂರು ಮಜಾ ಕೊಡುತ್ತದೆ. ಸದ್ಯಕ್ಕೆ ಇದು ನಾಲ್ಕನೆಯ ಸ್ಥಾನದಲ್ಲಿ.

೫. ತುಂಬಾ ನೋಡ್ಬೇಡಿ, ಲವ್ವು ಆಯ್ತದೆ ( ಸಾಹಿತ್ಯ : ಯೋಗರಾಜ್ ಭಟ್, ಗಾಯನ : ಹರಿಕೃಷ್ಣ )
ಮೊದಲನೆಯ ಸ್ಥಾನ ಈ ಹಾಡಿಗೆ  ಆಗಲೇ ಬಂದಾಗಿದೆ. ಭಟ್ರು - ಹರಿ ಗಳ ಮ್ಯಾಜಿಕ್ ಇಲ್ಲಿದೆ. ಹೆಚ್ಚು ಬೀಟ್ಸ್ ಇಲ್ಲದೆ ಬರಿಯ ತಮಟೆ ಸದ್ದಿಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿದ್ದಾರೆಸಂಗೀತ ನಿರ್ದೇಶಕ. ಲವ್ ಫಿಲಾಸಫಿ ಬೋಧಿಸಿದ್ದಾರೆ ಭಟ್ರು. 'ಟಡನ್ ಟಾ ಟಡನ್' ಈ ಹಾಡಿನ ಮುಖ್ಯ ಆಕರ್ಷಣೆ.

ಹೀಗೆ ಒಂದೊಂದು ಹಾಡು ವಿಭಿನ್ನವಾಗಿದೆ. ಹಾಡುಗಳ ಚಿತ್ರೀಕರಣ ನೋಡಿದ ಮೇಲೆ ಮತ್ತಷ್ಟು ಇಷ್ಟವಾಗಬಹುದು. ಅತಿಯಾದ ನಿರೀಕ್ಷೆ ಇಲ್ಲದೆ ಸುಮ್ಮನೆ ಆರಾಮಾಗಿ ಕೇಳಿದರೆ ಮುದಕೊಡುತ್ತದೆ.
ಚಿತ್ರಕ್ಕೆ ಶುಭ ಹರಿಸಿ ಕಾಯೋಣ. 

~ ಹೊಗೆ