ಸ್ಪೆಷಲ್ ಡೈರೆಕ್ಟರ್ ಇಂದ ಒಂದು 'ಒಂಟಿ ಮನೆ' ಕಥೆ.

ಎದ್ದೇಳು ಮಂಜುನಾಥ ಚಿತ್ರದಲ್ಲಿ ಕಣ್ಣುಗಳನ್ನು ದಾನ ಮಾಡಿ ಎಂಬ ಸಂದೇಶವನ್ನು 
ಸಾರಲು ವಿಶೇಷಾದ್ಭುತವಾಗಿ ಕಥೆ ನಿರೂಪಿಸಿದ್ದ ಗುರುಪ್ರಸಾದ್, ಈ ಬಾರಿ ಮನುಷ್ಯ ಸಂಬಂಧಗಳ ಈಗಿನ ಪರಿಸ್ಥಿತಿಯನ್ನು ಮಾರ್ಮಿಕವಾಗಿ ಹೇಳಿದ್ದಾರೆ ತಮ್ಮ 'ಡೈರೆಕ್ಟರ್ಸ್ ಸ್ಪೆಷಲ್' ಮೂಲಕ.

ಅದಕ್ಕಾಗಿ ಅವರು ಆರಿಸಿಕೊಂಡದ್ದು ಒಂದು ಒಂಟಿ ಮನೆ, ಒಂದಷ್ಟು ರಸವತ್ತಾದ ಸಂಭಾಷಣೆ, ಕೆಲವು ಕಂಡು ಕೇಳರಿಯದ ಸ್ವಯಂಕೃತ ಪೌರಾಣಿಕ ಕತೆಗಳು ಮತ್ತು ರಂಗಾಯಣ ರಘು.

ಕಥೆ ಆಸಕ್ತಿಕರವಾಗಿ ತೆರೆದುಕೊಳ್ಳುವುದೇ ನಾಯಕ ಮನೆಗೆ ತಂದ ರೆಡಿಮೇಡ್ ಅಪ್ಪ, ಅಮ್ಮ, ಅಣ್ಣ, ತಂಗಿ ಪಾತ್ರಗಳು ನಾಯಕನನ್ನೇ ಕೊಲ್ಲಲು ಹವಿಣಿಸಿದಾಗ. ನಾಯಕನ ಬಳಿ ಇರುವ ಸುಮಾರು ಅರ್ಧ ಕೋಟಿಯಷ್ಟು ದುಡ್ಡನ್ನು ಎಗರಿಸಲು ಅವರು ವಿವಿಧ ರೀತಿಯಲ್ಲಿ ಪರದಾಡುವ ಮಜಲುಗಳನ್ನು ತೋರಿಸಿದ್ದರೆ ಅದು ಒಂದು ಮಾಮೂಲಿ ಸಿನಿಮಾವಾಗಿ ಬಿಡುತ್ತಿತ್ತು. ಇಲ್ಲೇ ಗುರುಪ್ರಸಾದ್ ಗೆಲ್ಲುವುದು. ಕಥೆಯಲ್ಲಿ ಮುಂದೆ ಹೆಚ್ಚೇನು ಆಗದೆ ಬರಿ ಮೈಮನಗಳನ್ನು ಮುಟ್ಟಿ ತಟ್ಟುವ ಸಂಭಾಷಣೆ ಇಂದಲೇ ಕಥೆಯನ್ನು ಮುಂದೆ ಸಾಗಿಸಿಕೊಂಡು ಹೊಗುವುದನ್ನು ನೋಡುವುದೇ, ಅದಕ್ಕಿಂತ ಹೆಚ್ಚಾಗಿ ಕೇಳುವುದೇ ಕಿವಿಗೆ ಹಬ್ಬ.



ನೀವೇನಾದರೂ ಟೈಟಲ್ ನೋಡ್ಕಂಡು ಇದು ಕನ್ನಡ ಚಿತ್ರರಂಗವನ್ನು ವಿಡಂಬಿಸೋ ಚಿತ್ರ ಅಂದುಕೊಂಡು ಹೋದರೆ ಅಲ್ಲಿ ನಿಮಗಾಗುವುದು ಒಂದು ದೊಡ್ಡ ಮೋಸ. ಆದರೂ ಎಂದಿನಂತೆ ಚಿತ್ರರಂಗದವರ ಕಾಲೆಳೆಯುವುದನ್ನು ಗುರುಗಳು ಇಲ್ಲೂ ಮುಂದುವರೆಸಿದ್ದಾರೆ. ಆದರೆ ಪ್ರೇಮ್ ಪ್ರಸ್ತಾಪವೇ ಇರದೇ ಕಾತರದಿಂದ ಕಾದಿದ್ದ ಪ್ರೇಕ್ಷಕರ ಕಿವಿಗೆ 'ದಾಸ್ವಾಳ' ಇಟ್ಟಿದ್ದಾರೆ.

ರಂಗಾಯಣದ ಎರಡು ಪ್ರತಿಭೆಗಳು ಇಡೀ ಚಿತ್ರವನ್ನೇ ಆವರಿಸಿಕೊಂಡಿದೆ. ಒಂದು, ರಂಗಯಾಣ ರಘು. ಅವರ ದೈತ್ಯ ಪ್ರತಿಭೆ ಈ ಚಿತ್ರದಲ್ಲಿದೆ ಎಂದು ಅವರ ದೈತ್ಯ ಹೊಟ್ಟೆಯನ್ನು ಪೋಸ್ಟರ್ ಗಳಲ್ಲಿ ಬಿಟ್ಟಿದ್ದ ಗುರು ಮಾತಿಗೆ ತಪ್ಪದ ಹಾಗೆ ನಡೆದುಕೊಂಡಿದ್ದಾರೆ. ರಘು ಅಲ್ಲಲ್ಲಿ ಜಗ್ಗೇಶ್ ರನ್ನು ನೆನಪಿಸುತ್ತಾರೆ ಮತ್ತು ಅವರ ಸೋಮಾರಿ ಮಂಜುನಾಥನ ವಿಸ್ತೃತ ರೂಪವಂತೆಯೇ  ಕಾಣಿಸುತ್ತಾರೆ. ಆದರೂ, ಇತರ ಚಿತ್ರಗಳಂತೆ ರಘು ಅವರ ಕೈಯಲ್ಲಿ ಅತಿರೇಕದ ಅಭಿನಯಮಾಡಿಸದೆ  ರಂಗಾಯಣ ರಘುಗೆ  ಹೊಸರೂಪಕೊಟ್ಟಿದ್ದಾರೆ ಗುರು.

ಇನ್ನು ನಾಯಕ ನಟ 'ಸ್ಪೆಷಲ್ ಸ್ಟಾರ್' ಧನಂಜಯ ಕೂಡ ರಂಗಾಯಣದ ಮತ್ತೊಂದು ಪ್ರತಿಭೆ. ಅವರದ್ದು ಪ್ರಬುದ್ಧ ಪಾತ್ರ,  ಅಷ್ಟೇ ಪ್ರೌಢ ನಟನೆ. ಮೊದಲ ಚಿತ್ರದಲ್ಲೇ ಇಂತಹದೊಂದು ಸೂಕ್ಷ್ಮ ಅಭಿನಯ ಅವರಿಂದ ಮುಂದೆ ಹೆಚ್ಚಿನದ್ದನ್ನು ಅಪೇಕ್ಷಿಸುವಂತೆ ಮಾಡುತ್ತದೆ. ಗುರು, ನಾಯಕನ ಮೊದಲ ಚಿತ್ರವೆಂದು 
ಒಂದು ಅತ್ಯದ್ಭುತವಾದ ಪರಿಚಯ ಮಾಡಿಕೊಡುತ್ತಾರೆ, ಚಿತ್ರದ ಶುರುವಿನಲ್ಲಿ.

ಮಹೇಂದ್ರ ಸಿಂಹ ಅವರ ಛಾಯಾಗ್ರಹಣದಲ್ಲಿ ಬೆಳಕಿನ ಸಂಯೋಜನೆ ತುಂಬಾ 
ಚೊಕ್ಕದಾಗಿದೆ. ಪಾಪ ಅವರಿಗೆ ಒಂದು ಸಣ್ಣ ಮನೆಯಲ್ಲಿ ಎಲ್ಲಿ ತಾನೇ ಕ್ಯಾಮೆರ ಇಡಕ್ಕೆ ಜಾಗ ಇರತ್ತೆ ಹೇಳಿ. ಅನೂಪ್ ಸಿಳೀನ್ ಹಿನ್ನಲೆ ಸಂಗೀತ ಎಂದಿನಂತೆ ಸೌಂಡ್ ಅಂಡ್ ಸ್ಪೆಷಲ್.

ಚಿತ್ರದ ಕೊನೆಯಲ್ಲಿ ಗುರುಪ್ರಸಾದ್ ಕಾಣಿಸಿಕೊಂಡು ಚಿತ್ರಕ್ಕೆ ಸಿನಿಮೀಯ ಅಂತ್ಯ ಕೊಡ್ತಾರೆ. ಅದು ಬಹಳ ಅವಶ್ಯಕವಾಗಿತ್ತು ಬಿಡಿ. ಇಲ್ದಿದ್ರೆ ಸಿನಿಮಾ ಉದ್ದ ನಡೆಯುವ ಕಥೆಗೂ ಚಿತ್ರದ ಶೀರ್ಷಿಕೆಗೂ ಸಂಬಂಧಾನೆ ಇರುತ್ತಿರಲಿಲ್ಲ.

ಒಟ್ಟಿನಲ್ಲಿ ಹೇಳಬೇಕಾದರೆ ಲವ್, ಅಣ್ಣ-ತಂಗಿ,ಮದರ್ ಸೆಂಟಿಮೆಂಟ್, ಆಕ್ಷನ್, ಲಾಂಗು ಮಚ್ಚು ಇವೆಲ್ಲಾ ಏನು ಇರದೇ ಕೊನೆಗೊಂದು ಗಟ್ಟಿ ಕತೆಯೂ ಇರದ ಮತ್ತು 
ಗಾಂಧಿನಗರದ ಸಿದ್ಧ ಸೂತ್ರಗಳನ್ನು ಹಾರಿಬಿಟ್ಟ ಒಂದು ಟಿಪಿಕಲ್ ಗುರುಪ್ರಸಾದ್ ಸಿನಿಮಾ 'ಡೈರೆಕ್ಟರ್ಸ್ ಸ್ಪೆಷಲ್' !!


~ಹೊಗೆ

1 ಕಾಮೆಂಟ್‌: