ಪೇಪರ್ ದೋಣಿ KANNADA FILM REVIEW

ಪೇಪರ್  ದೋಣಿ ಇಟ್ಕೊಂಡು ಟೈಟಾನಿಕ್ ಲೆವೆಲ್ ಯೋಚನೆ ...

ನಾಯಕ ಚೇತನ್ (ನವೀನ್ ಕೃಷ್ಣ ) ಲೋಕೋದ್ಧಾರಕ. ಹುಟ್ಟು ಹೋರಾಟಗಾರ.
ವಿಷ್ಣುವಿನ ಹನ್ನೊಂದನೆಯ ಅವತಾರಕ್ಕೆ  ಜಸ್ಟ್ ಮಿಸ್ಸು.
ಎಸ್.ಓ.ಎಸ್  ಎಂಬ ಸಂಘಟನೆ ಕಟ್ಕೊಂಡು ಭಯೋತ್ಪಾದನೆ, ಭ್ರಷ್ಟಾಚಾರ, ಬಡತನ ನಿರ್ಮೂಲನೆ, ಉದ್ಯೋಗ ಕ್ರಾಂತಿ.. ಹೀಗೆ ಒಂದ ಎರಡ.. ನಾಯಕನ ತಲೇಲಿ ಓಡೋದು. ಅದನ್ನ ಕಾರ್ಯರೂಪಕ್ಕೆ ತಂದು ಕ್ಷಣಾರ್ಧದಲ್ಲಿ ಸಮಸ್ಯೆ ಬಗೆಹರಿಸೋದು. ಹೀಗೆ ಅಖಿಲ ಭಾರತದ ಎಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ತಾ ಸುಮ್ಮನಾಗದೆ ಇಡಿ ವಿಶ್ವದಲ್ಲೇ  ಶಾಂತಿ, ಸುವ್ಯವಸ್ಥೆ  ನೆಲ್ಸೋಹಂಗೆ ಮಾಡುವುದೇ ಈ ಎಸ್.ಓ.ಎಸ್ ಸಂಸ್ಥೆಯ ಗುರಿ.


ಅದೇನೋ ಗಾದೆ ಹೇಳ್ದಂಗಾಯ್ತು.. ನಮ್ ಎಲೆಲೇ ಆನೆ ಸತ್ತು ಬಿದ್ದಿರ್ಬೇಕಾದ್ರೆ, ಪಕ್ಕದ್ ಎಲೇಲಿ ಇರುವೆ ಹುಡುಕ್ದಂಗೆ ಅಂತ..
ಹೀಗೆ ಒಂದು ಹಂತದಲ್ಲಿ ಭಾರತದ ಸಮಸ್ಯೆಗಳನ್ನೇ ಮರೆತು  ಅಲ್ಜೀರಿಯ, ಇತ್ಯೋಪಿಯ, ಸೋಮಾಲಿಯ ದೇಶಗಳ ತೊಂದರೆಗೆಲ್ಲಾ  ನಾಯಕ ಮೂಗು ತೂರಿಸಲು ಹೋದಾಗ ನಿಮ್ಮ ತಲೆ ತಿರುಗಿದರೆ ಆಶ್ಚರ್ಯವಿಲ್ಲ.

ಮೇಲಿನ ಹಾಗೆ ಕಥಾವಸ್ತುವಿನಲ್ಲಿ ಸ್ವಲ್ಪ ವಿಭಿನ್ನತೆ ಇದ್ರೂ, ಇತರೆ ಎಲ್ಲಾ 'ಡಿಫರೆಂಟ್' ಚಿತ್ರಗಳಂತೆ ಇಲ್ಲೂ ತಾಯಿ ಸೆಂಟಿಮೆಂಟ್, ಆಕ್ಷನ್, ಲವ್, ಮರ ಸುತ್ತೋ ಹಾಡುಗಳು, ಹೀಗೆ 'ಡಿಫರೆಂಟ್' ಅಂಶಗಳನ್ನು ತುರುಕಲಾಗಿದೆ. ಒಂದು ಸೀರಿಯಸ್ ಚೇಸಿಂಗ್ ಸೀನೊಂದು  ಸ್ಕೂಲ್ ಪಕ್ಕ ಇರೋ ರೋಡ್ನಲ್ಲಿ ನಡಿತಾ ಇರತ್ತೆ. ಸ್ಕೂಲ್ನಲ್ಲಿ ಜನಗಣಮನ ಹಾಡುವುದನ್ನು ಕೇಳಿ ನಾಯಕ, ಖಳನಾಯಕ, ಗೂಂಡಾಗಳು ಎಲ್ಲ ಒಂದು ಕ್ಷಣ ನಿಂತರೆ ಅದನ್ನ ಕಾಮಿಡಿ ಅನ್ಬೇಕೋ ದೇಶಭಕ್ತಿಯ ಪರಾಕಾಷ್ಠೆ ಅನ್ಬೇಕೋ ಗೊತ್ತಿಲ್ಲ.


ನವೀನ್ ಕೃಷ್ಣ ಮುಳುಗೋ ಪೇಪರ್ ದೋಣಿನ  ಸ್ವಲ್ಪ ಹೊತ್ತಾದರೂ ತೇಲಿಸುವ ಪ್ರಯತ್ನ ಮಾಡಿದ್ದಾರೆ. ಅವರ ಪ್ರತಿಭೆಗೆ ತಕ್ಕ ಚಿತ್ರವಲ್ಲ. ನಾಯಕಿ ಶಾಂತಲ, ತಾಯಿಯ ಪಾತ್ರದಲ್ಲಿ ವಿನಯ ಪ್ರಸಾದ್, ಕ್ರಾಂತಿಕಾರಿ ಪಾತ್ರದ ಅವಿನಾಶ್ ಎಲ್ರೂ ಡಮ್ಮಿ.


ಶ್ರೀಸುಮನ್ ಸಂಗೀತದಲ್ಲಿ 'ಇರಬಹುದ ಇರಬಹುದ' ಹಾಡು ಇಂಪಾಗಿದೆ.
ಛಾಯಾಗ್ರಹಣ, ಸಂಕಲನದಲ್ಲಿ ವಿಶೇಷತೆ ಏನು ಇಲ್ಲ.


ನಿರ್ದೇಶಕ ಆರ್.ಕೆ. ನಾಯಕ್ ಅವರು ಎಂತಹ ಮಹತ್ವಾಕಾಂಕ್ಷಿ ಅಂತ ಈ ಚಿತ್ರದಲ್ಲಿ ಎದ್ದೆದ್ದು ಕಾಣುತ್ತದೆ. ಸ್ಲಂನಲಲ್ಲೇ ಸಾಫ್ಟ್ವೇರು, ಮಾಸಲ್ಲೇ ಮಾಹಿತಿ ತಂತ್ರಜ್ಞಾನ, 2500 ರೂಗಳಿಗೆ ಲಾಪ್ ಟಾಪು, ಹೀಗೆ ಎಲ್ಲೆ  ಮೀರಿ ಅವರ ಕನಸುಗಳು ಪೇಪರ್ ದೋಣಿಯ ಮೂಲಕ ಸಾಗರದಲ್ಲಿ ಈಜಾಡುವ ಪ್ರಯತ್ನ ಮಾಡಿದ್ದಾರೆ. ಅವರ ಪ್ರಯತ್ನ ಪ್ರಶಂಸಾರ್ಹ.ಆದರೆ ಸಿನಿಮಾ ಬದಲು ಒಂದು ಬೀದಿ ನಾಟಕವಾದರೂ 
ಮಾಡಿದ್ರೆ ಪ್ರೇಕ್ಷಕರ ಚೆಪ್ಪಾಳೆ ಗಿಟ್ಟಿಸಬಹುದಿತ್ತು.
~ಹೊಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ