BREAKING NEWS - KANNADA MOVIE REVIEW

ಬ್ರೇಕಿಂಗ್ ನ್ಯೂಸ್: 'ಮೇಷ್ಟ್ರು' ಪಾಠ ಬೋರ್ ಹೊಡ್ಸಲ್ಲ..
ರಾಜಕಾರಣಿ ಮುದ್ದೆ ತಿಂದದ್ದು, ಸಿನಿಮಾ ತಾರೆಯ ಮಗು ಒದ್ದೆ ಮಾಡಿದ್ದು,  ಈ ತರದ ಕ್ಷುಲ್ಲಕ ವಿಷಯಗಳನ್ನೆಲ್ಲಾ ಸುದ್ದಿ ಮಾಡಿ ಬೆಳಗಿಂದ ರಾತ್ರಿ 'ಬ್ರೇಕಿಂಗ್ ನ್ಯೂಸ್' ಬಿತ್ತರಿಸುವ ಮಾಧ್ಯಮಗಳಿಗೆ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಚುಚ್ಚು ಮದ್ದು ನೀಡಿದ್ದಾರೆ.
ಅದು ತಮ್ಮ ಚಿತ್ರದ 'ಬ್ರೇಕಿಂಗ್ ನ್ಯೂಸ್'ನ  ಹಾಸ್ಯ ಮಿಶ್ರಿತ ನಿರೂಪಣೆಯ ಮೂಲಕ.

ಕ್ಷಣಕ್ಕೊಂದು ಸುದ್ದಿಯಲ್ಲದ ಸುದ್ದಿ ಸ್ಫೋಟಿಸಿ ಸಾಮಾನ್ಯ ಜನರ ಸಣ್ಣ ಪುಟ್ಟ ಜಗಳಗಳನ್ನೇ ಬಂಡಾಯವಾಗಿಸಿಕೊಂಡು  'ಟಿ.ಆರ್.ಪಿ' ಎಂಬ ಪೆಡಂಭೂತದ ಹಿಂದೆ ಬಿದ್ದಿರುವ ಈಗಿನ ಕೆಲವು ಮಾಧ್ಯಮಗಳಿಗೆ ಈ ಚಿತ್ರ ಒಂದು ಉತ್ತಮ ಸಂದೇಶ. ಅದಕ್ಕಿಂತ ಹೆಚ್ಚಾಗಿ  ಬ್ರೇಕಿಂಗ್ ನ್ಯೂಸ್ ಎಂದ ಮಾತ್ರಕ್ಕೆ ಬಾಯಿಬಿಟ್ಟುಕೊಂಡು ನೋಡುವ ಮಹಾಜನಗಳಿಗೆ ಮೇಷ್ಟ್ರು ವಿಭಿನ್ನ ರೀತಿಯಲ್ಲಿ ತಿಳಿಹೇಳಿದ್ದಾರೆ.ಆದರೂ ಈ 'ಬ್ರೇಕಿಂಗ್ ನ್ಯೂಸ್' ಯುಗದಲ್ಲಿ,  ಕ್ಲೈಮ್ಯಾಕ್ಸ್ ನಲ್ಲಿ ಪೋಲಿಸ್ ಬರೋದು, ಕೊನೆಗೆ ನಾಯಕ ನಾಯಕಿ ಸುಸೂತ್ರವಾಗಿ  ಮದುವೆಯಾಗೋದು ಇವೆಲ್ಲ ಅನಾದಿಕಾಲದ ಚಿತ್ರಗಳಿಂದ ನೋಡಿ ನಮಗೆ ಬೇಸರವಾಗಿದೆ ಅನ್ನೋದು ನಿರ್ದೇಶಕರು ಮರೆತಿದ್ದಾರೆ.
ಅರ್ಜುನ್ (ಅಜಯ್ ರಾವ್) 'ಸಕಾಲ ಟಿವಿ'ಯ ಪ್ರೋಗ್ರ್ಯಾಮ್ ಹೆಡ್. ರಾಗಿ ಮುದ್ದೆ, ಕಬ್ಬಡಿ ಮುಂತಾದ ದೇಶೀಯ ವಸ್ತುಗಳ ಮೇಲೆ ಚಾನೆಲ್ ನಲ್ಲಿ ಕಾರ್ಯಕ್ರಮ ಮಾಡುತ್ತಿದ್ದ ಅವನಿಗೆ ಚಾನೆಲ್ ಮ್ಯಾನೇಜರ್ 'ಟಿ.ಆರ್.ಪಿ'  ಹೆಚ್ಚಿಸುವ ಕ್ರಿಕೆಟ್, ಸಿನಿಮಾ, ಸ್ಕ್ಯಾಂ ಗಳ ಮೇಲೆ ಕಾರ್ಯಕ್ರಮ ಮಾಡಲಿಲ್ಲವೇಕೆಂದು ಅವನಿಗೆ ಛೀಮಾರಿ ಹಾಕಿ ಅವನ ತಲೆಯಲ್ಲಿ 'ಸೆನ್ಸೇಷನಲ್ ನ್ಯೂಸ್'  ಎಂಬ ಬೀಜವನ್ನು ಬಿತ್ತುತ್ತಾರೆ. 

ಅದೇ ಸಂದರ್ಭದಲ್ಲಿ ಲೋಕಾಯುಕ್ತ ಸೋಮಶೇಖರ್ (ಅನಂತ್ ನಾಗ್) ರಾಜ್ಯದ ದೊಡ್ಡ ಹಗರಣಗಳನ್ನು ಬಯಲುಮಾಡಿರುತ್ತಾರೆ. ಅವರನ್ನು ಎಕ್ಸ್ಕ್ಲೂಸಿವ್  ಸಂದರ್ಶನ  ಮಾಡಿ 'ಸೆನ್ಸೇಷನಲ್ ನ್ಯೂಸ್'  ತರ್ತೀನಿ ಅಂತ ಹೊರಟ ಅರ್ಜುನ್ ಗೆ ಯಡವಟ್ಟಾಗಿ ಕೆಲಸ ಕಳೆದುಕೊಳ್ಳುತ್ತಾನೆ. ಆ ಯಡವಟ್ಟಿಗೆ ಕಾರಣವಾದ ಸ್ವತಹ ಲೋಕಾಯುಕ್ತರ ಮಗಳು 'ಶ್ರದ್ಧಾ'ಳನ್ನು  (ರಾಧಿಕ ಪಂಡಿತ್) ಅಪಹರಿಸಿ ನಿಗೂಢ ಜಾಗದಲ್ಲಿ ಅವಳನ್ನು ಬಚ್ಚಿಟ್ಟು 'ಸಕಾಲ ಟಿವಿ'ಗೆ ದೊಡ್ಡ ಸುದ್ದಿ ಕೊಟ್ಟು ಮನೆಮಾತಾಗುತಾನೆ. ಇತ್ತ ಲೋಕಾಯುಕ್ತರ ಮಗಳನ್ನು ಖದೀಮರು ಅಪಹರಿಸಿ 'ಡಿನೋಟಿಫಿಕೇಶನ್ ' ಕೇಸ್ ಖುಲಾಸೆ ಮಾಡಲು ಬೇಡಿಕೆ ಇಡುತ್ತಾರೆ. ಆ ಹೊತ್ತಿಗಾಗಲೇ ಅರ್ಜುನ್ - ಶ್ರದ್ಧಾ ನಡುವೆ ಪ್ರೇಮಾಂಕುರವಾಗಿ ಅರ್ಜುನನೇ ಮುಂದೆ ನಿಂತು ಅವಳನ್ನು ಖದೀಮರಿಂದ  ಬಿದಿಡಿಸುವ ಹೊತ್ತಿಗೆ ಪ್ರೇಕ್ಷಕನಿಗೆ 'ಬ್ರೇಕಿಂಗ್ ನ್ಯೂಸ್' ಕೊಂಚ ಸಪ್ಪೆಯಾಗಿಹೋಗಿರುತ್ತದೆ.

ಅಜಯ್ ರಾವ್ ನಿಮ್ಮ ಮನೆಮಗನ ಹಾಗೆ ಕಂಡರೆ ಅದು ಅವರ ಅಭಿನಯಕ್ಕೆ ಸಂದ ದೊಡ್ಡ ಪ್ರಶಸ್ತಿ. ರಾಧಿಕ ಪಂಡಿತ್ ಗೆ ಈ ಪಾತ್ರ ತುಂಬಾ ಸಲೀಸು. ಅನಂತ್ ನಾಗ್ 'ಸಂತೋಷ್ ಹೆಗ್ಡೆ'ಯ ಅಪರಾವತಾರ. ಅರುಣ್ ಸಾಗರ್ ಚಿತ್ರದಲ್ಲಿ ನಗ್ನ ಚಿತ್ರಕಾರನಾಗಿ ಒಂದು ಪ್ಲ್ಯಾಸ್ಟಿಕ್ ಸಾಕು ಮಾನ ಮುಚ್ಚಲು ಎಂದು ತಮ್ಮ ಕಲಾತ್ಮಕತೆ  ತೋರಿಸಿದ್ದಾರೆ. ರಂಗಾಯಣ ರಘು ಗೆ ಹೆಚ್ಚಿನ ಸ್ಕೋಪ್ ಇಲ್ಲ.

ಮನೋಮೂರ್ತಿ ಗೆ ಸಹಾಯಕರಾಗಿ ಮುಂಗಾರುಮಳೆ ಚಿತ್ರಕ್ಕೆ  ಅತ್ಯುತ್ತಮ ಸಂಗೀತ ಜೋಡಿಸಿದ್ದ ಸ್ಟೀಫನ್ ಪ್ರಯೋಗ್ ರ ಸಂಗೀತದಲ್ಲಿ 'ಓಡಿ ಹೋಗೋಣ' ಮತ್ತು 'ಸಂಬಂಧ  ಸನಿರಿಸ'  ಗೀತೆಗಳು ನೆನಪಿನಲ್ಲಿರುತ್ತದೆ. 'ಸಂಬಂಧ  ಸನಿರಿಸ'  ಹಾಡಿನಲ್ಲಿ ಮೋಹನ್ ಬಿ ಕೆರೆಯ ಕಲೆಗೆ ಬೆಲೆ, ಕೆಕೆ ಕ್ಯಾಮೆರಾ ಕೆಲಸಕ್ಕೆ ಅವರಿಗೆ ಚಾಮರ ಬೀಸಲೇಬೇಕು. ಬಸವರಾಜ್ ಅರಸ್ ಎಡಿಟಿಂಗ್ ನಿರ್ದೇಶಕನ ಆಣತಿಯಂತೆ.

ಇಂತಹ ಗಂಭೀರ ವಿಷಯದ ಬಗ್ಗೆ ಹೆಚ್ಚು ಲೆಕ್ಚರ್ ಕೊಡದೇ ಹಾಸ್ಯದ ಅಲೆಯಲ್ಲೇ ಸಾಗುವ ಚಿತ್ರಕಥೆಯಲ್ಲಿ ಕೆಲವು ಲೋಪದೋಷಗಳಿವೆ. ಹಾಸ್ಯ ಸಂಭಾಷಣೆಗಳು  ಎಲ್ಲ ಕಡೆ ನಿಮಗೆ ನಗು ತರಿಸುವುದಿಲ್ಲ. ಅಭಿನಯದ ಮೂಲಕವೆ ಕಾಮಿಡಿ ತೆಗೆಯಲು ಕನ್ನಡದಲ್ಲಿ ಚ್ಯಾಪ್ಲಿನ್, ಬೀನ್ ಗಳಿಲ್ಲವಲ್ಲ.
ಫೈಟ್ಸ್, ಹಾಡುಗಳು ಕೇವಲ ಕಮರ್ಷಿಯಲ್ ಕಾರಣಗಳಿಗೆ ತುರುಕಿದಂತಾಗಿ 'ನಾಗತಿ'ತನ ಕಳೆದು ಹೋಗಿದೆ. ಚಿತ್ರದಲ್ಲಿ ರೈತರ ಜಮೀನನ್ನು ಕಿತ್ತುಕೊಳ್ಳುವ ಬಂಡವಾಳಶಾಹಿಗಳಿಗೆ ಧಿಕ್ಕಾರ ಕೂಗಿಸುವ  ಮೇಷ್ಟ್ರುಅದೇ ಚಿತ್ರದ ಟೈಟಲ್ ಕಾರ್ಡ್ ನಲ್ಲಿ  'ನೈಸ್'ಆಗಿ ಕೆಲವರಿಗೆ 
ಧನ್ಯವಾದ ಹೇಳುವುದು ಎಷ್ಟರ ಮಟ್ಟಿಗೆ ಸರಿ ಅಂತ ಜನ ನಿರ್ಧರಿಸಲಿ.

ಇಷ್ಟು ದಿನ ಬರಿ ಟಿವಿಯಲ್ಲಿ 'ಬ್ರೇಕಿಂಗ್ ನ್ಯೂಸ್' ಕಾಟ ನೋಡುತ್ತಿದ್ದ ನಿಮಗೆ ಬೆಳ್ಳಿ ಪರದೆಯ ಮೇಲೆ 'ಬ್ರೇಕಿಂಗ್ ನ್ಯೂಸ್' ಆಟ ಇಷ್ಟವಾಗಬಹುದು!!




~ಹೊಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ