ಬಿಸಿ ಕುರ್ಚಿಯ ಬಿಸಿ ಬಿಸಿ ಅನುಭವಗಳು...

A LIFE TIME OPPORTUNITY

ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿದ್ದೆ ನಾನು ಆ ಒಂದು ಕರೆ ನನಗೆ ಬಂದಾಗ. ಅಲ್ಲಿ ಪುಸ್ತಕ ಪ್ರಾಧಿಕಾರದ ವತಿಯಿಂದ ಡಿಸ್ಕೌಂಟ್ ಮೇಳ ನಡೀತಾ ಇತ್ತು. ಪುಸ್ತಕ ಕೊಳ್ಳುವಲ್ಲಿ ಮಗ್ನನಾಗಿದ್ದೆ.
ನಿಮಗೆ ಗೊತ್ತಿರಲಿಕ್ಕಿಲ್ಲ ಅಂದರೆ ಇಲ್ಲಿ ಕೇಳಿ.. ಪುಸ್ತಕ ಕೊಳ್ಳುವಾಗ ಬಹಳ ಏಕಾಗ್ರತೆ ಬೇಕು. ಆ ಏಕಾಗ್ರತೆಯನ್ನೇ ಕೆಡಿಸುವಂಥ ಕರೆ ಅದಾಗಿತ್ತು.

ಅದು ಕನ್ನಡ ಕೋಟ್ಯಾಧಿಪತಿ ತಂಡದಿಂದ ಬಂದಿತ್ತು. ಅಲ್ಲಿಂದ ಶುರುವಾಯಿತು ನೋಡಿ ಕನಸುಗಳ ಸೌಧ. ಆ ಭಾವ ಮನುಷ್ಯ ಸಹಜವಾಗಿ ಬಂದದ್ದು. ಕರೆ ಅತಿಮಾನುಷ ಶಕ್ತಿಯಿಂದ ಆದದ್ದು. ನಂತರ ಕೆಲವು ಸುತ್ತುಗಳ ಆಯ್ಕೆ ಪ್ರಕ್ರಿಯೆಗಳು ಮುಗಿಯುವ ಹೊತ್ತಿಗೆ ತಿಂಗಳುಗಳೇ ಕಳೆದಿತ್ತು. ಆ ಕನಸಿನ ಸೌಧವೂ  ಬೆಳೆದಿತ್ತು.

ಚೆನ್ನೈಗೆ ಅಪ್ಪನೊಂದಿಗೆ  ಪ್ರಯಾಣ. ಆ ರೈಲಿನ ಪ್ರಯಾಣದಲ್ಲಿ ಮೂಡಿಬಂದ ಭಾವಗಳು ನನ್ನ ಬ್ಲಾಗಿನ 'ಭಯಗವನ'ದಲ್ಲಿ  ಓದಿ. ಸುವರ್ಣ ವಾಹಿನಿಯ ಆತಿಥ್ಯ ಅಚ್ಚುಕಟ್ಟಾಗಿತ್ತು. ಮೊದಲ ಬಾರಿಗೆ ಪುನೀತ್ ರನ್ನು ನೋಡಿದಾಗ ಎಕ್ಸೈಟ್ ಆಗಿದ್ದೆ.
ನನ್ನೊಂದಿಗೆ  ಬಂದಿದ್ದ ಮಿಕ್ಕ ಒಂಭತ್ತು ಜನ ಸ್ಪರ್ಧಿಗಳಲ್ಲಿ ಸ್ನೇಹವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ.
ಎಲ್ಲರೂ ಗೆಲ್ಲಲಿ ಎಂಬ ಮನೋಭಾವ ಯಾರಿಗಾದರು ಬಂದುಬಿಡತ್ತೆ ಅಲ್ಲಿ.

ಹೈಲೈಟ್ಸ್..
  • ಸ್ವತಃ ಪುನೀತ್ ಕರೆದು ಅವರ ಈಮೇಲ್ ಐಡಿ ಕೊಟ್ಟಾಗ ಆದ ಸಂತಸ, ರಾಘಣ್ಣ ನಂದೇ ಬೆಸ್ಟ್ ಎಪಿಸೋಡ್ ಅಂದಾಗ, ಗುರುಪ್ರಸಾದ್ ಕರೆದು ಬೆನ್ನು ತಟ್ಟಿದಾಗ ಆದ ಸಾರ್ಥಕ ಭಾವ ಇವೆಲ್ಲ ನೆನಪುಗಳು.
  • ಫಾಸ್ಟೆಸ್ಟ್ ಫಿನ್ಗರ್ಸ್ ಸುತ್ತಿಗೆ ಆಯ್ಕೆಯಾಗುವ ಮುನ್ನ ಒಮ್ಮೆ ದೇವರನ್ನ ಬೇಡಿಕೊಳ್ಳುವ ಪ್ರಯತ್ನ ಮಾಡಿದೆ. ಆದರೆ ಒಂದು ಕ್ಷಣಕ್ಕೆ ಈ ಯೋಚನೆ ಬಂತು - "ಈ ಹತ್ತು ಜನಗಳಲ್ಲಿ ನನ್ನನ್ನೇ ಯಾಕೆ ಆ ದೇವರು ಆಯ್ಕೆ ಮಾಡಬೇಕು? ನಾನೇನು ಸ್ಪೆಷಲ್ ಕಿಡ್ದೆ.. ಹ್ಜ್ಞಾಂ ..? ". ಈ ಯೋಚನೆ ಬಂದ ಮೇಲೆ ಸುಮ್ಮನೆ ಕೂತು ಆಟದ ಬಗ್ಗೆ ಗಮನ ಹರಿಸಿದೆ.
  • ಶೋ ಬಿತ್ತರವಾದ ದಿನದಿಂದ ನಾನು ಎಲ್ಲಿ ಹೋದರೂ ಜನ ಗುರುತಿಸುತ್ತಾರೆ.
  • ಆಟೋದವರು ನನ್ನ ನೋಡಿ ಜೈ ಮಾಕಾಳಮ್ಮ ಅಂದಾಗ ನನ್ನ ತುಟಿ ಅಂಚಿನಲ್ಲಿ ನಗೆ.
  • ಚಿತ್ರಮಂದಿರ, ಹೋಟೆಲ್, ಮಾಲ್ ಗಳಲ್ಲಿ ಜನ ನನ್ನ ಹತ್ತಿರ ಬಂದು ಅಭಿಮಾನ ತೋರಿಸಿದಾಗ ಖುಷಿ ಆಗತ್ತೆ.
  • ಈ ಸಂತಸ, ಖುಷಿ, ಸಂಭ್ರಮ.. ಈ ಜಿಗಿ ಈ  ಜಿಗಿ ..  ಎಲ್ಲವು ಎರಡು ದಿನ..
ಖ್ಯಾತಿ ನಶ್ವರ.. ಜ್ಞಾನ, ಕೃತಿ ಶಾಶ್ವತ.. ಜೈ ಮಾಕಾಳಮ್ಮ  :-)


ಅಲ್ಲಿ ನಡೆದಿದ್ದನ್ನ ಪದಗಳಲ್ಲಿ ಹೇಳುವ ಬದಲು ಈ ಕೆಳಗಿನ ವಿಡಿಯೋಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ.
CHECK THIS VIDEO LINKS FOR MY FULL EPISODE VIDEOS..















THANK YOU !!





ಡೈಲಾಗ್ಸ್ಗೇ ಕಾಸು ಗೋವಿಂದ.. ಕಥೆ ಶಿವನ ಪಾದಾರವಿಂದ..

"ನೀನ್ ಮುಮ್ತಾಜ್ ಅಂದ್ರೆ ನಾನ್ ಗುಮ್ತಾಜ್" ಅಂತ ಮಾತು ಮಾತಿಗೂ ಮುಟ್ ನೋಡ್ಕೊಳೋ ಸಂಭಾಷಣೆಗೆ ಪಡ್ಡೆ ಹುಡುಗರು 'ಸೈ' ಅಂದ್ರೆ ಮಡಿವಂತರು 'ಕೊಯ್' ಅನ್ನಬಹುದು.
ಹೌದು  ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಕೆ.ಎ. ಸುರೇಶ್ ನಿರ್ಮಿಸಿರುವ ಯುವ ನಿರ್ದೇಶಕ
ಪವನ್ ಒಡೆಯರ್ ಅವರ ಪ್ರಥಮ ಕಾಣಿಕೆ  'ಗೋವಿಂದಾಯ ನಮಃ' ಚಿತ್ರದ ಸಾರಂಶವಿದು.



ಗೋವಿಂದ (ಕೋಮಲ್) ಶುದ್ಧ ಅಲಾಲ್ಟೋಪಿ. ಅವನ ಜೀವನದ  ಹಾದಿಯಲ್ಲಿ ಸಿಗುವ ಮುಗ್ಧ ಹುಡುಗಿಯರನ್ನು ಪ್ರೀತಿಯ ಹೆಸರಲ್ಲಿ ವಂಚಿಸಿ ಕೊನೆಗೆ ತಾನು ನಿಜವಾಗಲು ಪ್ರೀತಿಸುವ ಹುಡುಗಿ ಅವನಿಗೇ ಮೋಸ ಮಾಡಿದಾಗ ಅವನಿಗೆ ಪ್ರೀತಿಯ ಬೆಲೆ ಅರ್ಥವಾಗಿ, ಪ್ರಾಯಶ್ಚಿತ್ತವಾಗಿ ಆತ್ಮಹತ್ಯೆಗೆ ಮುಂದಾಗುತ್ತಾನೆ. ಅವನ ಆತ್ಮಹತ್ಯಾ ಜೊತೆಗಾರನಾಗಿ ಸಿಗುವ 'ಹರೀಶ್ ರಾಜ್' ಕೂಡ ಪ್ರೀತಿಯ ಮೋಸಕ್ಕೆ ಬಲಿಯಾಗಿ ನೊಂದಿರುತ್ತಾನೆ. ಜಂಪಿಂಗ್ ಸ್ಟಾರ್ ಹರೀಶ್ ರಾಜ್ ಮತ್ತು ಸೆನ್ಸೇಶನಲ್ ಸ್ಟಾರ್ ಕೋಮಲ್ ಮಾತಿನ  ನಡುವೆ ನಡೆಯುವ ಕಥೆಯಲ್ಲಿ ಸಂಭಾಷಣೆ ಪ್ರೇಕ್ಷಕರನ್ನು  ನಗೆ ಸಾಗರದಲ್ಲಿ ಮುಳುಗಿಸುತ್ತದೆ.

ಪವನ್ ಒಡೆಯರ್ ಬರೆದಿರುವ ಡೈಲಾಗ್ಸ್ ಚಿತ್ರದ ಜೀವಾಳ. ಆದರೆ ಟೈಟಲ್ ಕಾರ್ಡ್ ಲಿದ್ದ ಹೊಸತನ ಚಿತ್ರ ಸಾಗುತ್ತ ಮಾಸಿಹೋಗಿ ಕ್ಲೈಮಾಕ್ಸ್ ನಲ್ಲಿ ಏನು ಉಳಿಯುವುದಿಲ್ಲ. ಕೋಮಲ್ ಅಭಿನಯ ಮತ್ತು ಹಾಸ್ಯದ ಟೈಮಿಂಗ್ ಬಗ್ಗೆ ಎರಡನೆಯ ಮಾತೇ ಇಲ್ಲ. ಚಿತ್ರದ ನಾಲ್ಕು ನಾಯಕಿಮಣಿಯರಲ್ಲಿ  ರೇಖಾ, ಮಧುಲಿಕ, ಅನ ಮತ್ತು ಪರುಲ್ ಇದ್ದಾರೆ. ಈಗಾಗಲೇ ಜನರಿಗೆ ಹುಚ್ಚು ಹಿಡಿಸಿರುವ 'ಪ್ಯಾರ್ಗೆ ಆಗ್ಬಿಟೈತೆ' ಹಾಡಲ್ಲಿ ಪರುಲ್ ಅದ್ಭುತವಾಗಿ ಕುಣಿದಿದ್ದಾರೆ. ಗುರುಕಿರಣ್ ಸಂಗೀತ ಚೆನ್ನಾಗಿದ್ದು, ಪದೇ ಪದೇ  ಹಿನ್ನಲೆ ಸಂಗೀತದಲ್ಲಿ ಬರುವ 'ಕುದುರೆ ಕೆನೆತ ' ಹೈಕಳಿಗೆ ರುಚಿಸುತ್ತದೆ. ಸಂಕಲನ, ಕ್ಯಾಮೆರ ಕೆಲಸ ಈಗಿನ ತಂತ್ರಜ್ಞಾನಕ್ಕೆ ತಕ್ಕುದಾಗಿದೆ.

ಕೋಮಲ್ ಶ್ರದ್ಧೆ ವಹಿಸಿ ಫೈಟ್ಸ್ ಮತ್ತು ನೃತ್ಯ ಮಾಡಿದ್ದಾರೆ. ಆದರೆ ಜನರಿಗೆ ಅದು ಹಿಡಿಸುತ್ತ ಎಂದು ಕೋಮಲ್ ಯೋಚಿಸಬೇಕಾಗಿದೆ. ಏನೇ ಆಗಲಿ, ಕನ್ನಡಕ್ಕೆ ಮತ್ತೊಬ್ಬ ಪವನ್ ಭರವಸೆ ಮೂಡಿಸಿದ್ದಾರೆ. ಗೆಳೆಯರೊಂದಿಗೆ ಹೋದಾಗ ಖುಷಿ ಕೊಡುವ ಚಿತ್ರ.. ಗೋವಿಂದಾಯ ನಮಃ !!!

ಹೋಗಿ ’ಪ್ರಸಾದ’ ಸ್ವೀಕರಿಸಿ ಬನ್ನಿ..

ಸಿನಿಮಾ ಹುಟ್ಟಿದ್ದು ಮನರಂಜನೆಗಾದರೂ ಅದು ಬೆಳಿಯುತ್ತಾ ಸಮಾಜದ ಮೇಲೆ ಪರಿಣಾಮ ಬೀರಿದ ಪರಿಣಾಮ ಅಗಾಧ. ಸಿನಿಮಾ ಮಾಡುವವರ ಮೇಲಿನ ಜವಾಬ್ದಾರಿ ಇದೆಯಲ್ಲ ಅದು ನಾವು ಊಹಿಸಿಕೊಳ್ಳುವುದಕ್ಕಿಂತ ದೊಡ್ಡದು. ತಮ್ಮ ಜವಾಬ್ದಾರಿ ಮತ್ತು ಸಾಮಾಜಿಕ ಕಳಕಳಿಯನ್ನು ಚೆನ್ನಾಗಿ ಬಲ್ಲ ಸಿನಿಮಾ ತಂಡ 'ಪ್ರಸಾದ್'.
ಫಾರ್ಮುಲ ಚಿತ್ರಗಳನ್ನು ನೋಡಿ ನೋಡಿ ಬೆಂಡಾದ ಪ್ರೇಕ್ಷಕರಿಗೆ ಈ ಬಿರು ಬೇಸಿಗೆಯಲ್ಲಿ 'ಪ್ರಸಾದ್' ಒಂದು ತಂಪಿನ ಸಿಂಚನ.
ನಿರ್ದೇಶಕ 'ಮನೋಜ್ ಸತಿ' ಅವರ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಕಥೆಯಲ್ಲಿ ಹೊಸದೇನಿಲ್ಲವಾದರು ಚಿತ್ರಕಥೆ, ನಿರೂಪಣಾ ಶೈಲಿ ಅದನ್ನು ಮರೆಸುವಂತಿದೆ.



ಕಾರ್ ಮೆಕಾನಿಕ್ 'ಶಂಕರ್' (ಅರ್ಜುನ್ ಸರ್ಜಾ) ಮತ್ತು ಅವನ ಹೆಂಡತಿ 'ಮಾಲತಿ'ಯದು ( ಮಾಧುರಿ ಭಟ್ಟಾಚಾರ್ಯ)
ಒಂದು ಚೊಕ್ಕ ಸಂಸಾರ.  ತಮ್ಮದಲ್ಲದ ಇಬ್ಬರು ಹೆಣ್ಣುಮಕ್ಕಳನ್ನು ತಮ್ಮ ಮಕ್ಕಳಂತೆಯೇ ನೋಡಿಕೊಳ್ಳುವ ಅವರಿಗೆ ಒಂದು ಗಂಡು ಮಗುವಾಗುತ್ತದೆ. ಮಗನ ಮೇಲೆ ಸಹಜವಾಗಿ ಅಪಾರ ಮಮತೆಯಿರುವ ಶಂಕರ್ ಗೆ, ಯಾವಾಗ ತನ್ನ ಮಗ ಕಿವುಡ ಮತ್ತು ಮಾತು ಬಾರದವ ಎಂದು ತಿಳಿಯುವುದೋ ಆಗ ಅವನಿಗೆ ಆಕಾಶವೇ ಕಳಚಿದಂತಾಗುತ್ತದೆ. ಅವನಿಗಿದ್ದ ದೇವರ ಮೇಲಿನ ನಂಬಿಕೆ ಇದ್ದಕಿದ್ದಂತೆ ನಶಿಸಿಹೋಗುತ್ತದೆ. ಮಗನನ್ನು ಶಾಲೆಗೆ ಸೇರಿಸಲು ಹಿಂದೂ ಮುಂದು ನೋಡುವ ಶಂಕರ್, ನಂತರ ಮನಸ್ಸು ಬದಲಾಯಿಸಿ ಶಾಲೆಗೆ ಸೇರಿಸುತ್ತಾನೆ. ತಾಯಿ ಪ್ರೀತಿ ಅವನನ್ನು ಈಜು ತರಬೇತಿಗೂ ಸೇರಿಸುವಂತೆ ಮಾಡುತ್ತದೆ. ಈಜಿನಲ್ಲಿ ಕೆಲವೇ ತಿಂಗಳಲ್ಲಿ ಅಪಾರ ಯಶಸ್ಸು ಗಳಿಸಿ ತಂದೆ ತಾಯಿ ಶಾಲೆಗೆ ಹೆಸರು ತರುತ್ತಾನೆ. ಹೀಗೆ ಸಾಗುವ ಕಥೆಯಲ್ಲಿ ಸಾಮಾಜಿಕ ಕಳಕಳಿಯಿದೆ, ಸಂಬಂಧಗಳ ವಾಂಛಲ್ಯವಿದೆ, ಅಪ್ಪ ಮಗನ ನಡುವಿನ ನವಿರಾದ ಪ್ರೀತಿಯಿದೆ ಮತ್ತು ಇಂದಿನ ಸಿನಿಮಾಗಳಲ್ಲಿ ಕಾಣದ ಹಲವು ಭಾವನಾತ್ಮಕ ಸನ್ನಿವೇಶಗಳಿವೆ.

ಅರ್ಜುನ್ ಸರ್ಜಾ ಕನ್ನಡ ಚಿತ್ರ ರಂಗಕ್ಕೆ ಮತ್ತೆ ಬಂದಿರುವುದು ನಮ್ಮ ಪಾಲಿನ ಅದೃಷ್ಟ. ಶಂಕರ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಮಾಧುರಿ ನಿಮ್ಮ ಮನೆಯ ಹುಡುಗಿಯಂತೆ ಕಾಣುತ್ತಾಳೆ. ಅವಳ ಪಾತ್ರದ ಡಬ್ಬಿಂಗ್ ಕಡೆ ನಿರ್ದೇಶಕ ಇನ್ನೂ ಗಮನವಹಿಸಬೇಕಿತ್ತು. 'ಪ್ರಸಾದ್' ಪಾತ್ರದಲ್ಲಿ ಮಾಸ್ಟರ್ ಸಂಕಲ್ಪ್ (ನಿಜ ಜೀವನದಲ್ಲೂ ಅಂಗವಿಕಲ) ಚಿತ್ರದ ಪ್ರಮುಖ ಆಕರ್ಷಣೆ. ಹಿರಿಯ ನಟ ರಾಮಕೃಷ್ಣ, ಶಂಕರ್ ಗೆಳೆಯನ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ.

ಇಳಯರಾಜ ತಮ್ಮ ಇಳಿವಯಸ್ಸಿನಲ್ಲೂ ಕಥೆಗೆ ತಕ್ಕುದಾದ ವಿಭಿನ್ನ ಹಿನ್ನಲೆ ಸಂಗೀತ ಜೋಡಿಸಿ ’ಓ ನನ್ನ ಕಂದ’ ಮತ್ತು ’ಒಂದು ಅರಮನೆ, ಅಲ್ಲಿ ಗಿಳಿಗಳು’ ಹಾಡುಗಳು ನೆನಪಿನಲ್ಲಿ ಉಳಿಸುವಂತೆ ಮಾಡಿದ್ದಾರೆ. ಸಂಜಯ್ ಮಲ್ಕಾನ್ ಕ್ಯಾಮೆರ ಹಿಂದೆ ಅಚ್ಚುಕಟ್ಟಾದ ಕೆಲಸ ಮಾಡಿದ್ದಾರೆ. ಅಶೋಕ್ ಖೇಣಿ ಇಂತಹ ಒಂದು ಪ್ರಯತ್ನಕ್ಕೆ ಹಣ ಹಾಕಿ ಒಳ್ಳೆಯತನ ಮೆರೆದಿದ್ದಾರೆ. ಅರ್ಜುನ್ ಸರ್ಜಾ ಅವರೇ ಅಚ್ಚ ಕನ್ನಡದಲ್ಲಿ ಸಂಭಾಷಣೆ ಬರೆದಿರುವುದು ಚಿತ್ರದ ಮತ್ತೊಂದು ಹೈಲೈಟ್.

'ಪ್ರಸಾದ್' ನಿಶ್ಯಬ್ಧದ ಕೂಗು ಎಂಬ ಅಡಿ ಬರಹವನ್ನು ಇಟ್ಟುಕೊಂಡಿದೆ. ಅದು ಚಿತ್ರಮಂದಿರದ ನಿಶ್ಯಬ್ಧದ ಕೂಗಾಗದೆ ಎಲ್ಲ ಕನ್ನಡ ಚಿತ್ರ ರಸಿಕರು ಈ ಚಿತ್ರವನ್ನು ನೋಡಬೇಕು. ಹ್ಞಾಂ.. ಚಿತ್ರಮಂದಿರದ ಆಚೆ ಬರುವ ಮುನ್ನ ಕಣ್ಣಂಚಿನ ನೀರೋರೆಸಿಕೊಳ್ಳುವುದನ್ನು ಮರೆಯಬೇಡಿ.

ಅಭಯಗವನ

ನೆನೆಸಿಕೊಂಡರೆ ಭಯ 
ಸೋಲುವ ಭಯ
ಸೋತರೆ ನಿರರ್ಥಕವಾಗುವ ಭಯ..  

ನಗುವವರ ಮುಂದೆ ನಿಲ್ಲುವ ಭಯ
ಹೀಯಾಳಿಕೆಗಳನು ಕೇಳುವ ಭಯ
ಸೋತರೆ ಸಂತೈಸುವವರ ಭಯ..

ದಿನ ಕಳೆದಂತೆ ಹೆಚ್ಚಾಗುವ ಭಯ
ಒಳಬಲವನ್ನೇ ಹೆದರಿಸುವ ಭಯ
ಗೆಲುವೆನ್ನುವುದಿದೆಯಂದೇ ಮರೆಸುವ ಭಯ..

ಸೋತು ಸುಣ್ಣಾಗುವ ಭಯ
ಗಾಯವು ಹುಣ್ಣಾಗುವ ಭಯ
ಕನಸುಗಳು ಮಣ್ಣಾಗುವ ಭಯ..

ಮಹದಾಶೆಗಳನು  ಈಡೇರಿಸುವ ಭಯ
ಹೊಸಗನಸುಗಳನು ನೈವೇರಿಸುವ ಭಯ
ಸೋಲುವ ಮುಂಚೆಯೇ ಸೋತೆನೆಂದು ಭಯ..

ಆ ನರೇಂದ್ರನಗಿಲ್ಲ ಈ ಭಯ
ಕೋಟ್ಯಂತರ ನರರಿಗೆ ಅವನೇ ಅಭಯ
ಜಯ ಜಯ ಜಯ..

ಪಾರಿಜಾತ - ಪ್ರೇಮಿಗಳಿಗೆ ಮುದ ಮಿಕ್ಕಿದವರಿಗೂ ಹದ

ಮತ್ತೊಂದು ರಿವ್ಯೂ.....!!

ಪಾರಿಜಾತ

ನಾಯಕ 'ಬಾಸ್' ಅಲಿಯಾಸ್ ಭಾಸ್ಕರ್  (ದಿಗಂತ್)  ಸೋಮಾರಿ, ನಿರುದ್ಯೋಗಿ ಮತ್ತು ಬೀದಿ ತಿರುಕ, ಅವರ ಹಿಂದಿನ ಸುಮಾರು ಸಿನಿಮಾಗಳಂತೆ ಇಲ್ಲೂ ಬೇಜವಾಬ್ದಾರಿ ಮನುಷ್ಯ. ಹಾಗಂತ ಕೆಲಸ ಹುಡುಕಿಕೊಂಡು ಹೋಗೋ ಪಾರ್ಟಿ ಅಲ್ಲ. ನಿನ್ ಕಾಲ್ ಮೇಲ್ ನೀನ್ ನಿಲ್ಲೋ ಅಂದ್ರೆ ನಾವೇನ್ ನಮ್ ತಾತನ ಕಾಲ್ ಮೇಲ್  ನಿಂತಿದಿವಾ  ಎನ್ನುವ ತಲಾಹರಟೆ. ಮನೇಲಿ ಮದುವೆ ಆಗ್ಬೇಕು ಅಂತ ಪ್ರಸ್ತಾಪ ಮಾಡಿದಾಗ ಎಲ್ಲ ಸೇರಿ ಅವನಿಗೆ ಮಂಗಳಾರತಿ ಮಾಡ್ತಾರೆ, ಕೈಯಲ್ಲಿ ಕೆಲಸ ಇಲ್ಲ ಮದ್ವೆ ಬೇರೆ ಎಂದು ಮೂದಲಿಸುತ್ತಾರೆ. ಅವನು ಮನೆ ಬಿಟ್ಟು ಹೋಗಲು ಸಜ್ಜಾಗುತ್ತಾನೆ. ಗೇಟಿನ ಬಳಿ ಹೋಗುತ್ತಿರಬೇಕಾದರೆ ಅವರ ಅಣ್ಣ ಓಡಿ ಬಂದು...

"ಮಳೆ   ಬರ್ತಾಇದೆ, ಛತ್ರಿ ತಗೊಂಡು ಹೋಗು, 
ಮತ್ತೆ ಅದಕ್ಕೋಸ್ಕರ ಮನೆ ಬಿಟ್ಟು ಹೋಗೋ ನಿರ್ಧಾರ ಕೈ ಬಿಡಬೇಡ " ಅಂತಾನೆ. ಮಧ್ಯಂತರ ವಿರಾಮ. ಪರದೇ  ಮೇಲೆ "ಮಳೆ ನಿಂತ ಮೇಲೆ ಬೆಂಕಿ ತರ ಕೆಲಸ ಮಾಡ್ತಾನೆ" ಎಂಬ ಸಾಲು ಬಿತ್ತರವಾಗತ್ತೆ.
 ಹೀಗೆ ಚಿತ್ರದುದ್ದಕ್ಕೂ ಗಂಭೀರ ಸನ್ನಿವೇಶಗಳೆಲ್ಲ ಹಾಸ್ಯದಲ್ಲಿ ಕೊನೆಯಾಗ್ತವೆ. 


ನಿರ್ದೇಶಕ ಪ್ರಭು ಶ್ರೀನಿವಾಸ್ ಮೂಲತಃ ನೃತ್ಯ ಸಂಯೋಜನಕಾರ. ಕನ್ನಡದಲ್ಲಿ ಹಿಂದೊಮ್ಮೆ 'ಜೀವಾ' ಚಿತ್ರ ಮಾಡಿದ್ದರು. 
ಈಗ 'ಪಾರಿಜಾತ' ವನ್ನು ಪ್ರೇಮಿಗಳ ಮುಂದಿಟ್ಟಿದ್ದಾರೆ. ಇದು ಒಂಥರ ROM -COM  (ರೊಮ್ಯಾಂಟಿಕ್  ಕಾಮಿಡಿ) ಸಬ್ಜೆಕ್ಟ್.
ಚಿತ್ರಕಥೆ ಅತ್ಯಂತ ಸರಳ. ನಾಯಕನ ಬೇಜವಾಬ್ದಾರಿಯನ್ನು ನಾಯಕಿ ಇಷ್ಟಪಟ್ಟರೂ ಮದುವೆ ವಿಷಯ ಬಂದಾಗ ಸಹಜವಾಗಿ ನಿರಾಕರಿಸುತ್ತಾಳೆ. ನಾಯಕ ಸಂಪಾದನೆ ಮಾಡಲು ಶರಣ್ ಜೊತೆಗೂಡಿ ಸಾಲಮಾಡುತ್ತಾನೆ, ಟುಟೋರಿಯಲ್ಸ್ ತೆರೆಯುತ್ತಾನೆ, ಸಾಲ ಕೊಟ್ಟ ಧಣಿಗಳ ಮಗ ಅದೇ ಟುಟೋರಿಯಲ್ಸ್ ನಲ್ಲಿ ಕಲಿತು ಎಸ್ಎಸ್ಎಲ್ಸಿ ಪಾಸ್ ಮಾಡಿದಾಗ ಧಣಿಗಳು ಮೆಚ್ಚಿ ಸಾಕಷ್ಟು ಉಡುಗೊರೆಯನ್ನು ಕೊಡುತ್ತಾರೆ. ಇತ್ತ ಮನೆಯಲ್ಲಿ ಅವನಿಗೆ ಮದುವೆ ಮಾಡಲು ಒಪ್ಪುತ್ತಾರೆ. ಸಿನಿಮಾ ಮುಗಿತು ಅನ್ನುವ ಹೊತ್ತಿಗೆ ಕಥೆಯಲ್ಲಿ ಕೆಲವು ತಿರುವುಗಳು ಸಿಗುತ್ತವೆ. ಅದನ್ನು ನೀವು ಚಿತ್ರಮಂದಿರದಲ್ಲಿ ನೋಡಿ.



ಐoದ್ರಿತ ರೇ ಮತ್ತು ದಿಗಂತ್  ನಡುವಿನ 'ರಸಾಯನ ಶಾಸ್ತ್ರ' ಚೆನ್ನಾಗಿ ಕೆಲಸ ಮಾಡಿದೆ. ಇಬ್ಬರು ಪರದೆ ಮೇಲೆ ಮಿಂಚ್ತಾರೆ.
ಲಿಪ್ಲಾಕ್ ಮಾಡಿದ್ದಾರೆ ಎಂಬ ಗುಲ್ಲು ಸುಳ್ಳು ಎಂದು ಚಿತ್ರದಲ್ಲಿ ತಿಳಿಯುತ್ತದೆ. ತುಟಿಗೆ ತುಟಿ ಒತ್ತುವ  ಹಾಗೆ ತೋರಿಸಿದ್ದಾರೆ ನಿರ್ದೇಶಕರು, ಮಧ್ಯ ಗಾಜಿಟ್ಟು.


ಐoದ್ರಿತ ರೇ ತುಂಡುಡುಗೆಯಲ್ಲಿ ಮಾದಕವಾಗಿ ಕಾಣಿಸುತ್ತಾರೆ. ಅವರ ಮುಖಭಾವ ಈ ಚಿತ್ರದಲ್ಲಿ ಅತ್ಯುತ್ತಮವಾಗಿದೆ, ಅಭಿನಯದಲ್ಲೂ ಪಕ್ವತೆ ಕಾಣುತ್ತಿದೆ. ದಿಗಂತ್ ಗೆ ಈ ಥರದ ಪಾತ್ರ ನೀರು ಕುಡಿದಂತೆ. ಶರಣ್ ಕಾಮಿಡಿ ಬಂದಾಗ ಜನ ಬಾಯ್ತುಂಬಾ ನಗ್ತಾರೆ. ದಿಗಂತ್ ಅಣ್ಣ ನ ಪಾತ್ರದಲ್ಲಿ ಕಾದಲ್ ದಂಡಪಾನಿ ಮಜಾ ಕೊಡುತ್ತಾರೆ. ಮಿಕ್ಕಂತೆ ಸಾಧು ಕೋಕಿಲ, ಪದ್ಮಜಾ ರಾವ್, ಮುಖ್ಯಮಂತ್ರಿ ಚಂದ್ರು ಇದ್ದಾರೆ. ಶಕೀಲಾ, ರಘು ಮುಖರ್ಜೀ ಬಂದು ಹೋಗುತ್ತಾರೆ. ಮನೋಮೂರ್ತಿ ಸಂಗೀತದಲ್ಲಿ 'ನೀ ಮೋಹಿಸು' ಮನಮುಟ್ಟುತ್ತದೆ, ಹಾಸ್ಯ ಸನ್ನಿವೇಶಗಳಲ್ಲಿ ಅವರು ಹಿನ್ನಲೆ ಸಂಗೀತ ಚೆನ್ನಾಗಿ ಜೋಡಿಸಿದ್ದಾರೆ. ಶ್ರೀನಿವಾಸ್ ದೇವಾಮ್ಸನ್ ಕ್ಯಾಮೆರ ಮೋಡಿಯಲ್ಲಿ 'ಓ ಪಾರಿಜಾತ' ಹಾಡಿನ ಮಂಜು ಕವಿದ ವಾತಾವರಣದ ದೃಶ್ಯ ವೈಭವ ಕಾಣಸಿಗುತ್ತದೆ. 


ತಮಿಳಿನ   'ಬಾಸ್ ಎಂಗಿರ ಬಾಸ್ಕರನ್' ರೀಮೇಕಾದ ಈ ಚಿತ್ರವೊಂದು ಈಸಿ ಟೈಮ್ ಪಾಸ್. ಕಥೆ - ಚಿತಕತೆಯ ಕ್ರೆಡಿಟ್ ತಮಿಳಿಗೆ ಸೇರಬೇಕಾದರೂ ಕನ್ನಡದಲ್ಲಿ ಹೆಚ್ಚು ಕಲರ್ಫುಲ್ ಆಗಿ ಬಂದಿದೆ ಎನ್ನುವುದು ಎರಡು ಚಿತ್ರಗಳನ್ನು ನೋಡಿದವರ ಅಭಿಪ್ರಾಯ.

ಚಿಂಗಾರಿ : ಗಲ್ಲಾಪೆಟ್ಟಿಗೆ ಫುಲ್ಲು ರೀ

ಇದ್ದಕ್ಕಿದ್ದಂಗೆ ಒಂದು  ಸಿನಿಮಾ ವಿಮರ್ಶೆ ಮಾಡಿದಿನಿ. ಯಾಕೆ ಏನು ಕಾಲ ಕೂಡಿ ಬಂದರೆ ಹೇಳ್ತೀನಿ. ಈಗ ಓದಿ.

ಚಿತ್ರ ನಿರ್ದೇಶಕ ಹರ್ಷ ಚಿಂಗಾರಿ ಹಾಡೊಂದರ ಚಿತ್ರೀಕರಣಕ್ಕೆ ಸಕಲೇಶಪುರದಲ್ಲಿ ಸಕಲ ಸಿದ್ಧತೆ ಮಾಡ್ಕೊಂಡಿದ್ರು. ಬೆಳಗ್ಗೆ ಆರು ಘಂಟೆಯಿಂದ ಶೂಟಿಂಗ್ ನಿಗದಿಯಾಗಿತ್ತು. ಇತ್ತ ಅದೇ ದಿನ ರಾಜ್ಯದ ಎಲ್ಲಾ ನ್ಯೂಸ್ ಚಾನೆಲ್ಲುಗಳಲ್ಲಿ ದರ್ಶನ್ ಪತ್ನಿ ಕಿರುಕುಳದ ಆರೋಪದ ಮೇರೆಗೆ ಅರೆಸ್ಟ್ ಆದ ಸುದ್ದಿ ಬಿತ್ತರವಾಗುತಿತ್ತು.


ಅಂದು ಹರ್ಷ ಮತ್ತು ನಿರ್ಮಾಪಕ ತಲೆ ಮೇಲೆ ಕೈಹೊತ್ತು ಕೂರುವಂತೆ ಮಾಡಿದ ಚಿತ್ರ ಇಂದು ಭರ್ಜರಿ ಪ್ರದರ್ಶನ ಕಾಣುತ್ತಾ ಸಾಗಿದೆ. ಜನ ಸಾರಥಿ ಹ್ಯಾಂಗ್ ಓವರ್ನಲ್ಲೇ ಚಿಂಗಾರಿ ನೋಡಲು ಉತ್ಸಾಹ ತೋರಿಸಿದ್ದಾರೆ. ಕನ್ನಡದ ಮಟ್ಟಿಗೆ 'ಚಿಂಗಾರಿ' ವಿಭಿನ್ನ ಪ್ರಯತ್ನ. ಚಿತ್ರದ ಅರ್ಧಕ್ಕಿಂತ ಹೆಚ್ಚು ಭಾಗ ಸ್ವಿಜರ್ಲೆಂಡಿನಲ್ಲಿ ಚಿತ್ರೀಕರಣವಾಗಿದೆ. ಪ್ರೇಕ್ಷರಿಗೆ ಕೊಟ್ಟ ಕಾಸಿಗೆ ಮೋಸವಾಗದಂತೆ ಸ್ವಿಜರ್ಲೆಂಡ್ ತೋರಿಸಲಾಗಿದೆ. ಹರ್ಷ 'ಗೆಳೆಯ' , 'ಬಿರುಗಾಳಿ' ಮಾಡಿ ಅವರ ಅಭಿರುಚಿ ಆಕ್ಷನ್ + ಥ್ರಿಲ್ಲರ್ + ಲವ್ ಎಂದು ಈಗಾಗಲೇ ತೋರಿಸಿದ್ದಾರೆ. ಚಿನ್ಗಾರಿಯಲ್ಲೂ ಅದೇ ಫಾರ್ಮುಲಾ ಅಳವಡಿಸಿಕೊಂಡಿದ್ದಾರೆ.

ಮಾನವ ಕಳ್ಳಸಾಗಣಿಕೆಯ ಮೇಲೆ ಚಿತ್ರದ ಕಥೆ ಹೆಣೆಯಲಾಗಿದೆ. ಚಿತ್ರದ ನಾಯಕಿ ಅವಳ ಗೆಳತಿಯೊಂದಿಗೆ ಸ್ವಿಜರ್ಲೆಂಡ್ ಗೆ ಗಿಟಾರ್ ಆಡಿಶನ್ಸ್ ಗಾಗಿ ಬರುತ್ತಾಳೆ. ಅವಳು ಮತ್ತು ಅವಳ ಗೆಳತಿಯನ್ನು ಭಾರತ ಮೂಲದ ಕಳ್ಳರು ಅಪಹರಿಸುತ್ತಾರೆ. ನಾಯಕ ನಾಯಕಿಯನ್ನು ರಕ್ಷಿಸಲು ಅಲ್ಲಿಗೆ ಹೋಗುತ್ತಾನೆ. ದರ್ಶನ್, ಭಾವನ ಜೊತೆಗೂಡಿ ಅಪಹರಣಕಾರ ಜಾಲ ಪತ್ತೆ ಮಾಡುತ್ತಾರೆ. ಮುಂದೇನಾಗುತ್ತದೆ ಎಂದು ನೀವು ಚಿತ್ರ ನೋಡಿ ಆನಂದಿಸಿ.

ದರ್ಶನ್ ಸ್ಟೈಲಿಶ್ ಸಿಸಿಬಿ ಪೋಲಿಸ್ ಆಗಿ ಅವರ  ಅಭಿಮಾನಿಗಳನ್ನು ಡೈಲಾಗ್ಸ್ , ಸಾಹಸಗಳಿಂದ  ಸಂತೋಷಗೊಳಿಸುತ್ತಾರೆ .ನಾಯಕಿ ದೀಪಿಕಾ ತಮ್ಮಯ್ಯ ರವರ ಲುಕ್ಸ್ ಮತ್ತು ಅಭಿನಯ ಭರವಸೆ ಮೂಡಿಸುವಂತಿಲ್ಲ. ಭಾವನಾಳಂಥ ನಟಿ ಈ ಪಾತ್ರ ಆಯ್ಕೆಮಾಡಿ ಅಚ್ಚರಿಪಡಿಸಿದ್ದಾರೆ. ವಿದೇಶಿ ನೃತ್ಯಗಾರರ  ಸಮಕ್ಕೆ 'ಬಿಚ್ಚಮ್ಮ'ಳಾಗಿದ್ದಾರೆ, ಪಾತ್ರಕ್ಕೆ 'ನ್ಯಾಯ' ಒದಗಿಸಿದ್ದಾರೆ. ಹರಿಕೃಷ್ಣ ಸಂಗೀತ ಆತುರದಲ್ಲಿ ಮಾಡಿದಂತಿದೆ. 'ಕೈ ಕಚ್ಚಾ ಅಸಡ'ದಂತ ಸಾಹಿತ್ಯ ಭಟ್ಟರನ್ನು ಬಿಟ್ಟರೆ ಬೇರೆಯಾರಿಂದಲೂ ಸಾಧ್ಯವಿಲ್ಲ ಬಿಡಿ.

 

ಹರ್ಷ ನಿರ್ದೇಶನಕ್ಕೆ ಮಹತ್ವ ಕೊಟ್ಟು ಈ ಚಿತ್ರದ ಹಾಡುಗಳಲ್ಲಿ ನಿರಾಸೆ ಮೂಡಿಸಿದ್ದಾರೆ. 'ಈ ಸಂಜೆ ಯಾಕಾಗಿದೆ' , 'ಹೂವಿನ ಬಾಣದಂತೆ' ಅಂತ ಹಾಡುಗಳನ್ನು ಹಿಂದಿನ ಚಿತ್ರಗಳಲ್ಲಿ ಕೊಟ್ಟು , ಈ  ಚಿತ್ರದಲ್ಲಿ ಪ್ರೇಕ್ಷಕರಿಗೆ ಲಾಸ್ ಮಾಡಿದ್ದಾರೆ ಅಂತಾನೆ ಹೇಳಬಹುದು. ದರ್ಶನ್ ಹಾಡೊಂದರಲ್ಲಿ ವಿಗ್ ಹಾಕಿದ್ದಾರೆ. ಅದು ಅವರ ಬಿಡುಗಡೆಯಾದ ಮೇಲೆ ಚಿತ್ರಿಸಿದ್ದು ಎಂದು ಗುರುತಿಸುವ ಮಟ್ಟಿಗೆ ಕಾಣುತ್ತದೆ. ಇತರ ಪಾತ್ರಗಳಲ್ಲಿ ಸೃಜನ್ ಲೋಕೇಶ್, ಅರುಣ್ ಸಾಗರ್, ರಮೇಶ್ ಭಟ್ ಇದ್ದಾರೆ.

ನಿರ್ದೇಶಕ ಹರ್ಷ ರವರಿಗೆ ಸ್ವಿಜರ್ಲೆಂಡ್ ನಲ್ಲೂ ಕಾಲು ಕಾಲಿಗೂ ಕನ್ನಡದರೇ  ಸಿಗುತ್ತಾರೆ, ದರ್ಶನ್ ಬಾಯಲ್ಲಿ 'ಕರ್ನಾಟಕ ಪೋಲಿಸ್ ಅಂದ್ರೆ ಏನ್ ಗೊತ್ತ' ಅಂತ ಸ್ವಿಜರ್ಲೆಂಡ್ ನಲ್ಲಿ ಹೇಳಿಸಿದ್ದಾರೆ. ಭಾರತದಲ್ಲಿ ಹೆಂಗಸರನ್ನು ಹೇಗೆ ಪೂಜ್ಯನೀಯವಾಗಿ ಕಾಣುತ್ತೇವೆ ಅಂತ ದೊಡ್ ದೊಡ್ ಡೈಲಾಗ್ ಹೇಳಿಸಿ ಕೊನೆಯಲ್ಲಿ ನಾಯಕಿಯನ್ನು ಮಾತ್ರ ರಕ್ಷಿಸಿ ಅವಳ ಗೆಳತಿಯನ್ನು ಮರೆತೇಬಿಡುತ್ತಾರೆ. ಹೀಗೆ ಅಲ್ಲಿ ಇಲ್ಲಿ ಕೆಲವು ಸನ್ನಿವೇಶಗಳನ್ನು ಬಿಟ್ಟರೆ 'ದಿಸ್ ಇಸ್ ಅ ಗುಡ್ ವಾಚ್'.

ದ್ವೈತ - ಒಂದ್ ಬ್ಲಾಗು, ಎರಡು ವ್ಯಥೆ

ದೃಶ್ಯ ೧:
 ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರೊಬ್ಬ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವಾಗ ಸಿಕ್ಕಿಹಾಕೊತಾನೆ.
ಸ್ಟೂಡೆಂಟ್ ಆದಾಗ ಯಾವತ್ತೂ ಹೆಲ್ಮೆಟ್ ಧರಿಸದಿದ್ದರೂ ಒಂದು ಬಾರಿಯೂ ಸಿಕ್ಕಿಬೀಳದೇ ತಪ್ಪಿಸಿಕೊಳ್ಳುತಿದ್ದ ಅವನ ಕೌಶಲತೆ ಈಗ ಇದ್ದಕಿದ್ದಂತೆ ಮಾಯವಾಗಿದೆ.
ತಲೇಲಿರೋ ಪೆಂಡಿಂಗ್ ಕೆಲಸಗಳು, ತಲೆಗೆ ಹತ್ತದ ಕೋಡು, ವೀಕ್ಲಿ ರಿಪೋರ್ಟುಗಳಲ್ಲಿ ಕ್ಲೈಂಟ್ಸಿಗೆ ಸುಳ್ ಸುಳ್ ಕೆಲಸ ತೋರಿಸುವ ರಗಳೆಗಳು ಇವೆಲ್ಲ ಅವನ ತಲೆಗೆ ತುಂಬಿ ಅವನು ಯೌವನದಲ್ಲೂ ಬಲಿತ ಗೆಡ್ಡೆಯಂತಾಗಿದ್ದಾನೆ.

ಹೀಗೆ ಅವನು ಮತ್ತೊಮ್ಮೆ ಸಿಕ್ಕಿಬಿದ್ದಾಗ...
ಮಾಮ- ಏನಪ್ಪಾ? ಏನ್ ಓದ್ತಾ ಇದ್ಯಾ?
ಸಾ.ಇಂ - ಸರ್, ಓದಿದ್ದೆಲ್ಲಾ ಆಗಿ, ಈಗ ದೊಡ್ ಸಾಫ್ಟ್ ವೇರ್ ಕಂಪನಿಯಲ್ಲಿ ಸಣ್ಣ ಕೆಲಸದಲ್ಲಿದ್ದೀನಿ
ಮಾಮ - (ಸ್ವಗತ - ಓ ಸಾಫ್ಟ್ವೇರು.. ಬಾಚ್ಕೊ ಬಾಚ್ಕೊ..) ಬನ್ನಿ ಸಾರ್.. ಡಿ ಎಲ್ ತೋರ್ಸಿ ಆಮೇಲ್ ಸಾಹೇಬ್ರತ್ರ 200 ರೂ ಫೈನ್ ಕಟ್ಟು.
(ತಿಂಗಳ ಕೊನೆ, ಕಾಸೆಲ್ಲಾ ಗೋತಾ, ರೂಮ್ ಬಾಡಿಗೆ, ವೀಕೆಂಡ್ ಪಾರ್ಟಿ, ಮಲ್ಟಿಪ್ಲೆಕ್ಸಲ್ಲಿ ಸಿನಿಮಾ, ಆಫೀಸಿನಲ್ಲಿ ಯಾವ್ ಯಾವನ್ದೋ ಮದುವೆ, ಮುಂಜಿಗೆಲ್ಲ ಕಲೆಕ್ಶನ್)
ಸಾ.ಇಂ - ಸಾರ್, ನೀವೆ ನೋಡಿ ಸರ್. I HAVE ONLY 20 BUCKS. ತಿಂಗಳ ಕೊನೆ, ಎಲ್ಲ ದುಡ್ಡು ಮನೆಗ್ ಕಳ್ಸಿಬಿಟ್ಟಿದಿನಿ. ತಾಯಾಣೆ ಬ್ಯಾಂಕ್ನಲ್ಲು ಇಲ್ಲ ಸರ್ !!
(ಇದ್ದಕಿದ್ದಂತೆ ಅವನ್ ಜೇಬಿನಿಂದ ಸ್ಮಾರ್ಟ್ ಫೋನ್ ತೆಗೆದು, ಮೊಬೈಲ್ ಬ್ಯಾಂಕಿಂಗ್ ಮೂಲಕ ಅವನ ಬ್ಯಾಂಕ್ ಬ್ಯಾಲೆನ್ಸ್ ಕೇವಲ 512 ರೂ ಅಂತ ತೋರಿಸ್ತಾನೆ)
ಮಾಮ - ಬಲ್ ನನ್ ಮಕ್ಳು ಕಣ್ರಯ್ಯ ನೀವು. ಒಟ್ಟೆಗ್ ಇಟ್ಟಿಲ್ಲ ಅಂದ್ರು ಜುಟ್ಟಿಗೆ ಮಲ್ಗೆ ಊವು ಅನ್ನಂಗೆ ಕೈಯಲ್ಲಿ ಕಾಸಿಲ್ಲ ಅಂತ ಏಳಕ್ಕೆ ಈ ಶೋಕಿ ಫೋನ್ ಬೇರೆ. ನಮ್ ಸಾಹೇಬ್ರತ್ರನೂ BLACKBERRY ಐತೆ.
ಮತ್ತೊಮ್ಮೆ ಅವನ ಪರ್ಸ್ ನೋಡಿ ಮಾವ್ನೋರು ಹೀಗ್ ಹೇಳ್ತಾರೆ..
"ಹೋಗ್ಲಿ.. ದುಡ್ಡಿಲ್ದೇ ಹೋದ್ರಿಲ್ಲಾ, ನಿನ್ ಪರ್ಸಲ್ಲಿ ಅದಿದ್ಯಲ್ಲ ಅದೇ ಕೊಡು. ಇವತ್ತಿಗೆ ಸಾಕಾಯ್ತದೆ"
ಸಾಫ್ಟ್ ವೇರ್ ಇಂಜಿನಿಯರ್ ಮಂಕು ಬಡಿದಂತೆ ನಿಂತಿರ್ತಾನೆ. ಮಾಮ ಮತ್ತೊಮ್ಮೆ ಕೇಳ್ತಾನೆ.
ಇವ ಇರೋ ಮೂರು 50 ರೂ ಬೆಲೆಯ ಸೊಡೆಕ್ಸೋ ಕೂಪನ್ ಅವನ ಕೈಗಿಟ್ಟು ಮರೆಯಾಗ್ತಾನೆ...



 ದೃಶ್ಯ ೨:
 ಒಬ್ಬ ಕರೀಕೋಟು ಮತ್ತು ಅವನ ಇಬ್ಬರು ಗೆಳೆಯರು ಬೆಂಗಳೂರಿನ ರಸ್ತೆಯೊಂದರಲ್ಲಿ ತ್ರಿಬ್ಸ್ ಹೋಗ್ತಾ ಇದ್ರು.
 ಸಹಜವಾಗಿ ಓರ್ವ ಟ್ರ್ಯಾಫಿಕ್ ಪೋಲಿಸ್ ಅವನನ್ನ ತಡೆದು ನಿಲ್ಲಿಸಿ ಫೈನ್ ಕಟ್ಟಲು ಹೇಳಿದ.
ಪೋಲೀಸ್ ಮತ್ತು ವಕೀಲರ ಮಧ್ಯೆ ಯಾವತ್ತು ಒಂದು ಸಮನ್ವಯವಿರುತ್ತದೆ.
ಆದರಿಲ್ಲಿ ಅವರಿಬ್ಬರ ನಡುವೆ ಏನೇನ್ ಮಾತ್ ಬಂತೋ, ಯಾರ‍್ಯಾರ್ ಅಪ್ಪ ಅಮ್ಮ ಇವರಿಬ್ಬರ ಜಗಳದಲ್ಲಿ ಬಂದ್ ಹೋದ್ರೋ ಕೊನೇಗ್ ಕೈ ಕೈ ಮಿಲಾಯಿಸೋ ತನಕ ಹೋದ್ರು.

ಸಾಮನ್ಯವಾಗಿ ಆ ಜನಕ್ಕೆ ಒಂದು ತೆರನಾದ ಅಹಂಕಾರವಿರುತ್ತೆ, ಅಧಿಕಾರದ ಅಮಲು ಎಂದರೆ ತಪ್ಪಲ್ಲ ಬಿಡಿ.
ಅವರು ಯಾರಿಗಾದರೂ ಏನ್ಬೇಕಾದರೂ ಬೈಯಬಹುದು. ಮೇಲೆ ಹೇಳಿದ ಹಾಗೆ ಆ ಸಾಫ್ಟ್ ವೇರ್ ಇಂಜಿನಿಯರನ್ನ ನಾಯಿಗಿಂತ ಕಡೆಯಾಗಿ ನೋಡಿದ ಹಾಗೆ.

ಆದರೆ ಇಲ್ಲಾದ ಸಮಸ್ಯೆ ಏನೆಂದರೆ ರಿಸೀವಿಂಗ್ ಎಂಡ್ ನಲ್ಲಿ ಇದ್ದಿದ್ದು ನ್ಯಾಯಾಂಗದ ಮತ್ತೊಂದು ಪೀಸು.
ಅದು ಕರೀಕೋಟಿನವ. ಅವ ಸೀದಾ ಹೋಗಿ ಸಂಘಕ್ಕೆ ಹೇಳ್ದ. ಸಂಘದವರು ಆ ಪೋಲೀಸನ್ನು ಸಸ್ಪೆಂಡ್ ಮಾಡಿ ಅಂತ "ಆರ್ಡರ್" ಮಾಡುದ್ರು. ಆ ಡಿಪಾರ್ಟ್ಮೆಂಟ್ ನವರು ಅಷ್ಟು ತಲೆಗ್ ಹಚ್ಕೊಳಿಲ್ಲ. ಕರೀಕೋಟಿನ ಸಂಘ ಸ್ವಲ್ಪ ದಿನ ನೋಡಿತು.
ದೇಶದ ಇತಿಹಾಸದಲ್ಲೆ ಒಂದು ಕೆಟ್ಟ ಪ್ರತಿಭಟನೆಗೆ ನಾಂದಿ ಆಯ್ತು.

ಮೇಲ್ಗಡೆ ನಡೆದ ಸೇಮ್ ಸೀನ್. ಈ ಬಾರಿ ಸಿಕ್ಕಿಹಾಕೊಂಡಿದ್ದು ಲಾಯರ್.

ಪೋ - ಓ ಹೊ ಹೊ. ಲಾಯರ್ ಸಾಹೇಬ್ರು. ನಮಸ್ಕಾರ. ಬರ್ಬೇಕು ಬರ್ಬೇಕು.

ಲಾ - ಏನದು ವ್ಯಂಗ್ಯ? ಅದಕ್ಕೆಲ್ಲಾ ಟೈಮ್ ಇಲ್ಲ ಈಗ.. ಸಂಘದ ಜನರಲ್ ಬಾಡಿ ಮೀಟಿಂಗ್ ಗೆ ಹೋಗ್ಬೇಕು. ನನ್ಯಾಕ್ ತಡೆದೆ?

ಪೋ - ಹೆಲ್ಮೆಟ್ ಹಾಕಿಲ್ದೇ ಇರೋದಕ್ಕೆ ಫೈನ್ ಕೊಟ್ಟು ನೀನ್ ಎಲ್ಬೇಕಾದ್ರೂ ಹೋಗು.

ಲಾ - ಫೈನ್ ಕಟ್ಟೋ ಜಾಯಮಾನ್ ನಮ್ದಲ್ಲ.. ಅಷ್ಟಿದ್ರೆ ಬೇಗ ಒಂದು ನೋಟೀಸ್ ಕೋಡು, ನಾನು ಕೋರ್ಟಲ್ಲಿ ನೋಡ್ಕೋತೀನಿ.

ಪೋ - ಇನ್ನು ನಿಮ್ ಕೊಬ್ಬು ಕಮ್ಮಿ ಆಗಿಲ್ಲ ಅಲ್ವಾ? ಮೊನ್ನೆ ಮಾಡಿದ್ ನಿಮ್ ಹಾಳ್ ಮೆರವಣಿಗೆಯಿಂದ ಪಬ್ಲಿಕ್ ಕೈಲಿ ಇನ್ನು ಬೈಸ್ಕೊತಾ ಇದ್ದೀರ..

ಲಾ - ಅದೆಲ್ಲಾ ಮೀಡಿಯದವರ ಕೆಲಸ. ನಮ್ಮನ್ನ ಕೆಟ್ಟದಾಗಿ ತೋರಿಸಿದಾರೆ.

ಪೋ - ಕೆಟ್ದಾಗಿ ಮಾಡಿದ್ರೆ ಕೆಟ್ದಾಗೆ ತೊರ‍್ಸದು. ಅಲ್ಲಾ, ಎಂಟು ಗಂಟೆ ಕಾಲ ನಗರದ ಹೃದಯ ಭಾಗದಲ್ಲಿರೋ ಮೈಸೂರ್ ಬ್ಯಾಂಕ್ ಸರ್ಕಲ್ನಲ್ಲಿ ಜಾಮ್ ಮಾಡೋದ್ ಒಂದು ಸ್ಟ್ರೈಕಾ !
ಥೂ.. ಅದು ದೇಶದ್ರೋಹದಷ್ಟೇ ಸಮ. ಎಷ್ಟ್ ಜನ ಟ್ರೈನ್, ಬಸ್, ಫ್ಲೈಟ್ ಮಿಸ್ ಮಾಡ್ಕೊಂಡ್ರು.. ಎಷ್ಟ್ ಜನ ರೋಗಿಗಳು ಆಸ್ಪತ್ರೆಗ್ ತೆರಳದೇ ಪರದಾದಿಡ್ರು, ಎಷ್ಟ್ ಜನ ಕಂದಮ್ಮಗಳು ಸ್ಕೂಲ್ ಬಸ್ನಲ್ಲೇ ಜಾಮಲ್ಲಿ ಸಿಕ್ಕಿ
ಹಸಿದು ಕೂತಿದ್ರು. ಇದ್ಯಾವುದಕ್ಕೂ ಬೆಲೆನೇ ಇಲ್ದೇ ಅಮಾನವೀಯರಾಗಿ ನಡ್ಕೊಂಡ್ರಲ್ಲಾ!

ಲಾ - ಎಂಟ್ ಗಂಟೆ ಮಾಡಿದ್ದು ನಾವಲ್ಲ. ಸ್ಟ್ರೈಕ್ ಶುರುವಾಗಿ ಐದು ಗಂಟೆ ಕಾಲವಾದ್ರೂ ನಿಮ್ ಕಮಿಷನರ್ ಸ್ಥಳಕ್ಕೆ ಬರದೇ ಕೂತಿದ್ರಲ್ಲ. ಅದು ನಿಮ್ ತಪ್ಪು.

ಪೋ - ಹೌದೌದು. ನಿಮ್ ವೃತ್ತಿಗೆ ಬೆಲೆ ಕೊಟ್ಟು ಲಾಠಿ ಚಾರ್ಜ್ ಮಾಡದೇ ಬಿಟ್ರಲ್ಲ.. ಅದು ನಮ್ ತಪ್ಪೇ!!

ಈ ಮೇಲಿನದು ನಿಲ್ಲದ ವಾದ.
ಮುಗಿಯದ ಕಲಾಪ.
ಆದರೆ ಜನಸಾಮನ್ಯರು ವಿನಾಕಾರಣ ಮತ್ತೊಮ್ಮೆ ಸಂತ್ರಸ್ತರಾದರು.
ಹೀಗೆ ವಿನಾಕಾರಣ ನಾವು ಸಂತ್ರಸ್ತರಾಗುತ್ತಲೇ ಇರುತ್ತೇವೆ. ನಮಗೆ ರೂಢಿಯಾಗಿಬಿಟ್ಟಿದೆ.

ನಾವು ಏನಾದರು ಮಾಡಲೇಬೇಕು, ಒಗ್ಗೂಡಬೇಕು, "ಜನಸಾಮಾನ್ಯ ಸಂಘ"ವೊಂದನ್ನು ಕಟ್ಟಿ ಹೋರಾಡಬೇಕು ಅಂತೆಲ್ಲ ಬರೆಯುವುದು ತೀರ ಬಾಲಿಶವಾದುದು.
ಹಾಗೆ ಸಂಘವೊಂದು ಬಂದರೆ ಅದು ಮತ್ತೊಂದು ಕೆಟ್ಟ ರಾಜಕೀಯ ಪಕ್ಷವಾಗಬಹುದಷ್ಟೆ.
ವಿಧಿಯಾಟ, ಕಲಿಯುಗ ನಮ್ ಪಾಡೆ ಇಷ್ಟು ಅಂದ್ರೆ ದೇವರ ಮೇಲೆ ತುಂಬಾ ಭಾರ ಹಾಕ್ದಂಗಾಗತ್ತೆ..
"ಏನ್ ಮಾಡದೋ ನಂಗೊಂತು ಗೊತ್ತಾಯ್ತಾಲ್ಲ"